ಹುಬ್ಬಳ್ಳಿ: ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಪಂಡರಪುರಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆಯು ಧಾರವಾಡ ಮತ್ತು ಪಂಡರಪುರ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 07357/07358 ಧಾರವಾಡ–ಪಂಡರಪುರ–ಧಾರವಾಡ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ರೈಲುಗಳು ಜುಲೈ 23ರಿಂದ 28ರವರೆಗೆ ಒಟ್ಟು 6 ಟ್ರಿಪ್’ಗಳು ಸಂಚರಿಸಲಿವೆ.
ರೈಲು ಸಂಖ್ಯೆ 07357: ಧಾರವಾಡದಿಂದ ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ ಹೊರಟು, ಅದೇ ದಿನ ಸಂಜೆ 4:50ಕ್ಕೆ ಪಂಡರಪುರ ತಲುಪಲಿದೆ. ಮರುಪ್ರಯಾಣ, ರೈಲು ಸಂಖ್ಯೆ 07358: ಪಂಡರಪುರದಿಂದ ಪ್ರತಿದಿನ ಸಂಜೆ 6:40ಕ್ಕೆ ಹೊರಟು, ಮರುದಿನ ಬೆಳಿಗ್ಗೆ 4:30ಕ್ಕೆ ಧಾರವಾಡ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಅಳ್ನಾವರ, ಲೊಂಡಾ, ಖಾನಾಪುರ, ದೇಸೂರ, ಬೆಳಗಾವಿ, ಪಚ್ಛಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್ ಜಂಕ್ಷನ್, ಅರಗ್, ಧಾಳಗಾವ್, ಜತ್ ರೋಡ್, ವಾಸುದ್ ಹಾಗೂ ಸಾಂಗೋಲಾ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲು ಒಟ್ಟು 10 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 8 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯವನ್ನೊಳಗೊಂಡ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.




