ಸಾಕಷ್ಟು ಹಬ್ಬಗಳಲ್ಲಿ ಗುರು ಪೂರ್ಣಿಮಾ ಅತ್ಯಂತ ಮಹತ್ತರವಾದ ಅರ್ಥ ಹೊಂದಿರುವ ಪವಿತ್ರ ದಿನ. ‘ಗುರು’ ಮತ್ತು ಪೂರ್ಣಿಮಾ ಎಂಬ ಎರಡು ಶಬ್ದಗಳ ಸಮ್ಮಿಲನವೇ ಈ ಹೆಸರು. ‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ, ‘ರು’ ಎಂದರೆ ಅದನ್ನು ಹೋಗಲಾಡಿಸುವವನು. ಅಂದರೆ, ನಮ್ಮಲ್ಲಿರುವ ಅಜ್ಞಾನ ದೂರಮಾಡಿ ಜ್ಞಾನದ ಬೆಳಕಿನತ್ತ ಮುನ್ನಡೆಸುವ ಮಹಾನ್ ಚೇತನವೇ ಗುರು. ಇದೆಲ್ಲಾ ಹೇಳುವುದಕ್ಕೆ ಪ್ರಮುಕ ಕಾರಣ ಇವತ್ತು ಗುರು ಪೂರ್ಣಿಮೆ ಹಾಗಾದ್ರೆ ಇದರ ಮಹತ್ವ ಇಲ್ಲಿದೆ ನೋಡಿ
ಈ ದಿನವು ನಮಗೆ ಶಿಕ್ಷಣ ನೀಡಿದ ಶಿಕ್ಷಕರು, ಆಧ್ಯಾತ್ಮಿಕ ದಾರಿ ತೋರಿದ ಗುರುಗಳು, ಜನ್ಮ ನೀಡಿದ ಪೋಷಕರು ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಪರ್ವಕಾಲವಾಗಿದೆ.ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ.
ಸನಾತನ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ಚತುರ್ವೇದಗಳನ್ನು ವಿಂಗಡಿಸಿ, ಸಂಕಲಿಸಿದ ಹಾಗೂ ಮಹಾಭಾರತದಂತಹ ಮಹಾಕಾವ್ಯವನ್ನು ರಚಿಸಿದ ಗೌರವಾನ್ವಿತ ಋಷಿ ಮಹರ್ಷಿ ವೇದವ್ಯಾಸರ ಜನ್ಮ ಜಯಂತಿ ಈ ದಿನದಂದೇ ಸ್ಮರಿಸಲಾಗುತ್ತದೆ. ಹೀಗಾಗಿ ಇದನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ.
ಬೌದ್ಧ ಧರ್ಮೀಯರಿಗೂ ಇದು ಪವಿತ್ರ ದಿನವಾಗಿದ್ದು, ಭಗವಾನ್ ಬುದ್ಧನು ಸಾರನಾಥದಲ್ಲಿ ತನ್ನ ಐದು ಮಂದಿ ಶಿಷ್ಯರಿಗೆ ಮೊದಲ ಬಾರಿಗೆ ಧರ್ಮೋಪದೇಶ ನೀಡಿದ ದಿನವಾಗಿ ಗುರು ಪೂರ್ಣಿಮೆಯನ್ನು ಪ್ರಾರ್ಥನೆಗಳೊಂದಿಗೆ ಆಚರಿಸುತ್ತಾರೆ. ಯೋಗ ಸಂಪ್ರದಾಯದ ಪ್ರಕಾರ, ಶಿವನು ‘ಆದಿಗುರು’ವಾಗಿ ಸಪ್ತಋಷಿಗಳಿಗೆ ಜ್ಞಾನ ಬೋಧನೆ ಆರಂಭಿಸಿದ್ದು ಇದೇ ದಿನ ಎಂಬ ನಂಬಿಕೆಯಿದೆ.
2026ರ ಗುರು ಪೂರ್ಣಿಮಾ: ದಿನಾಂಕ ಮತ್ತು ಶುಭ ಮುಹೂರ್ತ:
ಪೂರ್ಣಿಮಾ ತಿಥಿ ಮುಕ್ತಾಯ: 2026ರ ಜುಲೈ 29, ಬುಧವಾರ ಸಂಜೆ 8:05 ರವರೆಗೆ
ಚಂದ್ರೋದಯ ಸಮಯ: 2026ರ ಜುಲೈ 29, ಬುಧವಾರ ಸಂಜೆ 7:21 ಕ್ಕೆ (ಶುಕ್ಲ ಪೂರ್ಣಿಮಾ ಚಂದ್ರನ ಉದಯ)
ಗುರು ಪೂರ್ಣಿಮಾ ದಿನಾಂಕ: 2026ರ ಜುಲೈ 29, ಬುಧವಾರ
ಪೂರ್ಣಿಮಾ ತಿಥಿ ಪ್ರಾರಂಭ: 2026ರ ಜುಲೈ 28, ಮಂಗಳವಾರ ಸಂಜೆ 6:18 ಕ್ಕೆ
ಗುರು ಪೂರ್ಣಿಮೆಯಂದು ಮಾಡಬೇಕಾದ ಸತ್ಕಾರ್ಯಗಳು:
ಆಧ್ಯಾತ್ಮಿಕ ಚಿಂತನೆ: ಸತ್ಸಂಗ, ಯೋಗಾಭ್ಯಾಸ, ಧ್ಯಾನ ಅಥವಾ ಆಧ್ಯಾತ್ಮಿಕ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಿ.
ಧಾರ್ಮಿಕ ಕ್ಷೇತ್ರ ದರ್ಶನ: ಸಮೀಪದ ದೇವಾಲಯಗಳು, ಮಠಗಳು ಅಥವಾ ಆಶ್ರಮಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ.
ಗ್ರಂಥ ಪಠಣ: ಭಗವದ್ಗೀತೆ, ಮಹಾಭಾರತ, ಉಪನಿಷತ್ತು ಅಥವಾ ಗುರು ಚರಿತ್ರೆಯಂತಹ ಪವಿತ್ರ ಗ್ರಂಥಗಳ ಅಧ್ಯಯನ ಮಾಡಿ.
ಕೃತಜ್ಞತೆ ಸಲ್ಲಿಸಿ: ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿದ ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ಮಾರ್ಗದರ್ಶಕರನ್ನು ಸ್ಮರಿಸಿ, ಅವರಿಗೆ ಶುಭಾಶಯ ತಿಳಿಸಿ.
ಸೇವಾ ಕೈಂಕರ್ಯ: ಬಡವರಿಗೆ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಅನ್ನದಾನ, ಪುಸ್ತಕ ಹಾಗೂ ಬಟ್ಟೆಗಳನ್ನು ದಾನ ಮಾಡುವುದು ಅತ್ಯಂತ ಪುಣ್ಯದ ಕೆಲಸವಾಗಿದೆ.ಜ್ಞಾನದ ಹಾದಿಯಲ್ಲಿ ನಮ್ಮನ್ನು ನಡೆಸುವ ಪ್ರತಿಯೊಂದು ಜೀವಕ್ಕೂ ಶಿರಸಾಷ್ಟಾಂಗ ನಮಸ್ಕಾರ ಸಲ್ಲಿಸಲು ಈ ಗುರು ಪೂರ್ಣಿಮೆ ಅತ್ಯಂತ ಸೂಕ್ತವಾದ ದಿನವಾಗಿದೆ.
ಸರಳ ಪೂಜಾ ವಿಧಾನ:
ಗುರು ದರ್ಶನ: ನಿಮಗೆ ಆಧ್ಯಾತ್ಮಿಕ ಗುರುಗಳಿದ್ದರೆ, ಅವರನ್ನು ನೇರವಾಗಿ ಭೇಟಿ ಮಾಡಿ ಅಥವಾ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿ.
ಗುರು ಪೂರ್ಣಿಮೆಯ ದಿನದಂದು ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗಲು ಈ ಕೆಳಗಿನ ಕ್ರಮಗಳಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಬಹುದು:
ಶುಚಿರ್ಭೂತರಾಗುವುದು: ದಿನದಂದು ಮುಂಜಾನೆ ಬೇಗ ಎದ್ದು, ಪವಿತ್ರ ಸ್ನಾನವನ್ನು ಮುಗಿಸಿ, ಸಾಧ್ಯವಾದರೆ ಮಂಗಳಕರವಾದ ಬಿಳಿ ಬಣ್ಣದ ಬಟ್ಟೆ ಧರಿಸಿ.
ಹಿರಿಯರ ಆಶೀರ್ವಾದ: ಮನೆಯಲ್ಲಿರುವ ತಂದೆ-ತಾಯಿ, ಅಣ್ಣ, ಹಿರಿಯರು ಮತ್ತು ಗುರುಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಿ.
ಸೂರ್ಯಾರ್ಘ್ಯ ಮತ್ತು ಗಣಪತಿ ಪೂಜೆ: ಪೂಜೆಯ ಆರಂಭದಲ್ಲಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ, ನಂತರ ವಿಘ್ನನಿವಾರಕ ಹಾಗೂ ಜ್ಞಾನದೇವನಾದ ಶ್ರೀ ಮಹಾಗಣಪತಿ ಆರಾಧಿಸಿ.
ವಿಶೇಷ ಪೂಜೆಗಳು: ಈ ಪವಿತ್ರ ದಿನದಂದು ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಹೂವುಗಳನ್ನಿಟ್ಟು ಪೂಜಿಸುವುದು, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುವುದು ಅತ್ಯಂತ ಶ್ರೇಷ್ಠ.
ದಾನ-ಧರ್ಮ: ಗುರುಗಳಿಗೆ, ಬ್ರಾಹ್ಮಣರಿಗೆ ಅಥವಾ ಸಾಧಕರಿಗೆ ಬಟ್ಟೆ, ಪಾದರಕ್ಷೆ, ಹಣ್ಣು-ಹಂಪಲು ಮತ್ತು ದಕ್ಷಿಣೆ ನೀಡಿ ಗೌರವಿಸಿ. ಈ ದಿನ ಗುರು ಮಂತ್ರಗಳನ್ನು ಪಠಿಸುವುದು ಶುಭ ಫಲ ನೀಡುತ್ತದೆ.





