ಬೆಂಗಳೂರು: ಸರ್ಕಾರದಿಂದ ಹಂಚಿಕೆಯಾಗಿರುವ ಸೈಟ್ಗಳಲ್ಲಿ ಮನೆ ಕಟ್ಟದೇ ಖಾಲಿ ಬಿಟ್ಟರೆ ಅಂತಹವರಿಂದ ನಿವೇಶನಗಳನ್ನ ವಾಪಸ್ ಪಡೆಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ತ್ಯಾಜ್ಯ ಮುಕ್ತ ಹಾಗೂ ಸುಂದರ ಬೆಂಗಳೂರನ್ನ ನಿರ್ಮಿಸುವ ಉದ್ದೇಶದಿಂದ, ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರೊದಿಗೆ ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ಸರ್ಕಾರದಿಂದ ಪಡೆದ ಸೈಟ್ ಖಾಲಿ ಬಿಟ್ಟರೆ ಅಥವಾ ಮನೆ ಕಟ್ಟದೇ ಇದ್ರೆ, ಅದನ್ನ ವಾಪಸ್ ಪಡೆಯುವ ಕೆಲಸ ಆಗುತ್ತೆ ಎಂದಿದ್ದಾರೆ.ಖಾಲಿ ಸೈಟನ್ನ ವಾಪಸ್ ಪಡೆಯುವಂತಹ ಕೆಲಸ ಆಗುತ್ತೆ. ಸರ್ಕಾರ ಮನೆ ಕಟ್ಟಲಿ ಅಂತ ಸೈಟ್ ಕೊಟ್ಟಿರೋದು, ಕಸ ಹಾಕಲಿ ಅಂತ ಅಲ್ಲ. ಖಾಲಿ ಸೈಟ್ ಮಾಡಿಕೊಂಡು ಕಸ ಹಾಕಿದ್ರೆ ಸಹಿಸಲ್ಲ ಎಂದರು.
ಬಿಡಿಎ, ಬಿಬಿಎಂಪಿ ಸೈಟ್ ಇರಲಿ, ಮನೆ ಕಟ್ಟದೇ ಖಾಲಿ ಬಿಟ್ಟರೆ ಡಬಲ್ ಟ್ಯಾಕ್ಸ್ ಕಟ್ಟಬೇಕಾಗುತ್ತೆ. ಅಥವಾ ಮನೆ ಕಟ್ಟದೇ ಇದ್ರೆ ಖಾಲಿ ಸೈಟನ್ನ ವಾಪಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಮೈಸೂರಿನಲ್ಲಿ ಮಾತನಾಡಿ, ನಾನು ಮೈಸೂರಿನ ಅಳಿಯ, ರಾಜ್ಯದಲ್ಲಿ ಮತ್ತೊಮ್ಮೆ ಬಲಿಷ್ಠ ಸರ್ಕಾರ ರಚಿಸಲು ಜನರು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.
ಚುನಾವಣೆಗೂ ಮುನ್ನ ಚಾಮುಂಡೇಶ್ವರಿ ತಾಯಿಯ ಬಳಿ ದೊಡ್ಡ ಜವಾಬ್ದಾರಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಆ ಆಶೀರ್ವಾದದಿಂದಲೇ ಜನರು ಅವಕಾಶ ನೀಡಿದ್ದಾರೆ. ಬೆಲೆ ಏರಿಕೆಯಿಂದ ಜನರ ಆದಾಯ ಕುಸಿದಿದ್ದ ಸಂದರ್ಭದಲ್ಲಿ ನಾವು ನೀಡಿದ ಗ್ಯಾರಂಟಿ ಯೋಜನೆಗಳು ಇಂದು ದೇಶಕ್ಕೇ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು
ಮೈಸೂರು ರೋಡ್ ಶೋ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಪ್ರೀತಿ ಮತ್ತು ಅಭಿಮಾನದಿಂದ ಸ್ವಾಗತಿಸಿದ ಎಲ್ಲರಿಗೂ ಧನ್ಯವಾದ, ನಾನು ಮತ್ತು ಸಿದ್ದರಾಮಯ್ಯ ಇಡೀ ರಾಜ್ಯ ಪ್ರವಾಸ ಮಾಡಿ 136 ಸ್ಥಾನಗಳನ್ನು ಗೆದ್ದಿದ್ದೇವೆ ಎಂದರು.
ರಾಜ್ಯಕ್ಕೆ ಮತ್ತೊಮ್ಮೆ ಬಲಿಷ್ಠ ಸರ್ಕಾರಕ್ಕೆ ನೀವು ಅವಕಾಶ ಮಾಡಿಕೊಡಿ. ನಾನು ನಿಮ್ಮೂರಿನ ಅಳಿಯ. ನನಗೆ ಕನಕಪುರ ಬೇರೆ ಅಲ್ಲ, ಮೈಸೂರು ಬೇರೆ ಅಲ್ಲ. ನಾನು ಮುಖ್ಯಮಂತ್ರಿ ಆದರೂ ಮೈಸೂರು ಅಳಿಯನೇ ಎಂದು ಹೇಳಿದರು.





