ಮೈಸೂರು:ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿವಿವೇಕ ಸ್ಮಾರಕ ಉದ್ಘಾಟನೆಗಾಗಿ ಬಂದಿದ್ದು, ಮೊದಲು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಕಲ ಜನರ ಅಭಿವೃದ್ಧಿ, ಸಮೃದ್ಧಿ ಹಾಗೂ ತಮ್ಮ ಸಾರ್ವಜನಿಕ ಜೀವನದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.
ಈ ಶುಭ ಸಂದರ್ಭದಲ್ಲಿ ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಅನಿಲ್ ಚಿಕ್ಕಮಾದು ಹಾಗೂ ರವಿಶಂಕರ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದ್ದಾರೆ.
ದೇಗುಲದ ಆಡಳಿತ ಮಂಡಳಿಯಿಂದ ಗೌರವ ಹಾಗೂ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ಸಿಎಂ, ದೇವಿಯ ಚರಣಗಳಿಗೆ ನಮಿಸಿ ಆಯುಷ್ಯ, ಕೀರ್ತಿ ಮತ್ತು ನಾಡಿಗೆ ಸಕಲ ಸೌಭಾಗ್ಯಗಳು ಲಭಿಸಲೆಂದು ಮಹಾಮಂಗಳಾರತಿಯಲ್ಲಿ ಭಾಗಿಯಾಗಿದ್ದರು.
ಇತ್ತ ಡಿ.ಕೆ. ಶಿವಕುಮಾರ್ ಮೈಸೂರಿಗೆ ಬಂದ ಹಿನ್ನಲೆ ಭರ್ಜರಿ ರೋಡ್ಶೋ ನಡೆಸಿದರು. ಹಾದಿಯುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿದರು. ಕಾರಂಜಿ ಕೆರೆಯಿಂದ ಆರಂಭಗೊಂಡ ಈ ಬೃಹತ್ ರೋಡ್ಶೋ ಕುರುಬರಹಳ್ಳಿ ಸರ್ಕಲ್ವರೆಗೂ ಮುಂದುವರೆದಿತ್ತು. ಡಿ.ಕೆ. ಶಿವಕುಮಾರ್ ಅವರು ತೆರೆದ ವಾಹನದಲ್ಲಿ ಸಾಗುತ್ತಿದ್ದಾಗ, ಕಾರ್ಯಕರ್ತರು ವೀಳ್ಯದೆಲೆ, ಆ್ಯಪಲ್ ಮತ್ತು ಬೆಲ್ಲದ ಹಾರಗಳನ್ನು ಹಾಕಿ ತಮ್ಮ ನೆಚ್ಚಿನ ನಾಯಕನನ್ನು ವೆಲ್ ಕಮ್ ಮಾಡಿಕೊಂಡಿದ್ದಾರೆ.
ಇದರ ನಂತರ ಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡುತ್ತಿದೆ. ಹಾಗಾಗಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ’ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು,ಇಡೀ ವಿಶ್ವವೇ ಇಂದು ಕರ್ನಾಟಕವನ್ನ ಗಮನಿಸುತ್ತಿದೆ. ಹಳ್ಳಿ, ನಗರಗಳಲ್ಲಿ ಯುವಶಕ್ತಿ ಸರಿಯಾಗಿ ಬಳಸಿಕೊಳ್ಳಬೇಕು, ಹಾಗಾಗಿ ಕೆಲ ಯೋಜನೆಗಳನ್ನ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಹೇಳಿದರು. ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಯುವಕರ ಕನಸು ದೇಶದ ಕನಸಾಗಿದೆ. ವಿವೇಕಾನಂದರ ಯೋಚನೆಗಳನ್ನ ನಮ್ಮ ಸರ್ಕಾರ ಪಾಲಿಸುತ್ತೆ ಎಂದರು.





