ಹೊಸ ಮನೆಗೆ ಕರೆಂಟ್ ಕನೆಕ್ಷನ್ ನೀಡಲು ಲಂಚ ಕೇಳಿದ್ದ ಸೆಸ್ಕಾಂ ಅಧಿಕಾರಿ ಲೋಕಾಯುಕ್ತ ಲಾಕ್‌!

ಮಂಡ್ಯ: ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕಾಂ) ಮಂಡ್ಯ ನಗರ ಉಪ ವಿಭಾಗದ ಸಹಾಯಕ ಎಂಜಿನಿಯರ್ (AE) ಶ್ರೀನಿವಾಸ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಕ್ಕಾಗಿ ಇವರು ಭ್ರಷ್ಟಾಚಾರದ ಹಾದಿ ಹಿಡಿದಿದ್ದರು.

ನಿಯಮ ಮೀರಿ ಸೌಲಭ್ಯ ಕೊಡುವ ಆಮಿಷ

ಮನೆಗೆ ಅಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲು ಹಾಗೂ ಇಲಾಖೆಗೆ ಪಾವತಿಸಬೇಕಾದ ನಿಯಮಾನುಸಾರ ಅಭಿವೃದ್ಧಿ ಶುಲ್ಕವನ್ನು ವಿನಾಯಿತಿ ಕೊಡಿಸುವುದಾಗಿ ನಂಬಿಸಿ ಎಇ ಶ್ರೀನಿವಾಸ್ ಅವರು ಅರ್ಜಿದಾರರಿಂದ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಧಿಕಾರಿಯ ಈ ನಡೆಯಿಂದ ಬೇಸತ್ತ ನಾಗರಿಕರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ

ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದ ತಂಡವು ಕಾರ್ಯಾಚರಣೆಯ ಬಲೆ ಹೆಣೆದಿತ್ತು. ಅದರಂತೆ, ಮೊದಲ ಕಂತಾಗಿ ದೂರುದಾರರಿಂದ 30 ಸಾವಿರ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಹೊಂಚು ಹಾಕಿದ್ದ ಅಧಿಕಾರಿಗಳು ದಾಳಿ ನಡೆಸಿ, ಶ್ರೀನಿವಾಸ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share it :

Leave a Reply

Your email address will not be published. Required fields are marked *