ಮಣ್ಣೆತ್ತಿನ ಅಮಾವಾಸ್ಯೆಯ ಮೌಲ್ಯ ನಗರವಾಸಿಗಳಿಗೆ ತಿಳಿದಿರುವುದಿಲ್ಲದಿದ್ದು, ಒಂದು ವೇಳೆ ಗೊತ್ತಿದ್ದರು ಅದು ಕಡಿಮೆ ಮಟ್ಟದಲ್ಲಿ ಅರಿತುಕೊಂಡಿರುತ್ತಾರೆ. ಆದರೆ ಮಣ್ಣೆತ್ತಿನ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಇದನ್ನು ರೈತರು ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಮುಂಗಾರು ಹಂಗಾಮಿನ ಕೃಷಿ ಹಬ್ಬ ಇದಾಗಿದ್ದು, ರೈತರು ತಮ್ಮ ಹೊಲದಲ್ಲಿ ದುಡಿಯುವ ಎತ್ತುಗಳನ್ನು ಪೂಜೆ ಮಾಡುತ್ತಾರೆ.
ಈ ದಿನದಂದು ಮನೆಯಲ್ಲಿ ಅದ್ಧುರಿಯಾಗಿ ದೇವರಿಗೆ ಪೂಜೆ ಪುನಸ್ಕಾರ ಮಾಡಿ, ನಂತರ ಸಿಹಿ ಅಡುಗೆ ಮಾಡಿ ಸವಿಯುತ್ತಾರೆ. ಈ ಸಿಹಿ ಊಟವನ್ನು ಎತ್ತುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಗೆ ಮಹತ್ವ ಹಳ್ಳಿಗಳಲ್ಲಿ ಸಾಗರದಷ್ಟಿದೆ. ಹೌದು ಮನುಷ್ಯನ ಹೊಟ್ಟೆಯಲ್ಲಿ ಹುಟ್ಟಿ, ಮಣ್ಣಿನ ಮಡಿಲಿನಲ್ಲಿ ಮುಕ್ತಿ ಹೊಂದುತ್ತೇವೆ. ಈ ಮಣ್ಣಿನ ನೈಜ್ಯ ಮೌಲ್ಯ ರೈತನಿಗೆ ಮಾತ್ರ ತಿಳಿದಿರುತ್ತದೆ.
ಅನ್ನದಾತ ಅತೀ ಹೆಚ್ಚು ಪ್ರೀತಿಸುವುದು ಕೃಷಿ,ಭೂಮಿ ಮತ್ತು ಎತ್ತುಗಳನ್ನು ಹೌದು ಮಣ್ಣಿನ ಮಹತ್ವವೇ ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇವತ್ತು ಗ್ರಾಮೀಣ ಭಾಗಗಳಲ್ಲಿ ರೈತರು ಹೊಲದಿಂದ ಮಣ್ಣನ್ನು ತಂದು ಆ ಮಣ್ಣಿನಿಂದ ಎತ್ತುಗಳನ್ನು ತಯಾರಿ ಮಾಡಿ, ನಂತರ ಎತ್ತುಗಳಿಗೆ ಬೇಕಿರುವಂತಹ ಗ್ವಾದಲಿಯನ್ನು ತಯಾರಿ ಮಾಡುತ್ತಾರೆ. ಗ್ವಾದಲಿ ಎಂದರೆ ಎತ್ತುಗಳಿಗೆ ಮೇವು ಹಾಕಲು ನೀರು ಕುಡಿಸಲು ಉಪಯೋಗಿಸುವಂತ ವಸ್ತುವಾಗಿದ್ದು, ಇದಕ್ಕೆ ಗ್ವಾದಲಿ ಎನ್ನುತ್ತಾರೆ. ಇದೆಲ್ಲಾವನ್ನು ಮಾಡಿ ಮಣ್ಣಿನಲ್ಲಿ ರೆಡಿ ಮಾಡಿದ ಎತ್ತುಗಳಿಗೆ ಪೂಜೆ ಮಾಡುತ್ತಾರೆ.
ಈ ಮಣ್ಣು ಎತ್ತುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ ನಂತರ ಈ ಎತ್ತುಗಳನ್ನು ದೇವರ ಜಗಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಇಲ್ಲಿ ಕೆಲವು ಬಾಲ್ಯ ನೆನಪುಗಳನ್ನು ಎಲ್ಲರನ್ನು ಕೆದಕುತ್ತಲೇ ಇರುತ್ತವೆ ಅಂದರೆ ಈ ಹಳ್ಳಿಯಲ್ಲಿ ಬೆಳೆದ ಮಕ್ಕಳು ಎಲ್ಲ ರೀತಿಯ ಹಬ್ಬಗಳಲ್ಲಿ ಅವರದ್ದೇ ಆದ ಕೆಲವು ವಿಶೇಷತೆಗಳನ್ನು ಹೊಂದಿರುತ್ತಾರೆ.
ಗ್ರಾಮಗಳಲ್ಲಿ ಮಣ್ಣು ಎತ್ತಿನ ಪೂಜೆ ಮುಗಿದ ನಂತರ ಚಿಕ್ಕ- ಚಿಕ್ಕ ಮಕ್ಕಳು ಆ ಮಣ್ಣು ಎತ್ತುಗಳನ್ನು ತೆಗೆದುಕೊಂಡು, ಮನೆ ಮನೆಗೆ ಹೋಗಿ ಕಾಳು-ಕಡಿಗಳನ್ನು ಸಂಗ್ರಹ ಮಾಡಿಕೊಂಡು ಬರುತ್ತಾರೆ. ಮನೆ ಮುಂದೆ ಹೋಗಿ ಒಂದು ಮಾತನ್ನು ಹೇಳುತ್ತಾರೆ ಆ ಮುಗ್ಧ ಮಕ್ಕಳು -ಅದು ಏನಪ್ಪಾ ಅಂದ್ರೆ ಎಂಟು ಎತ್ತು ಬಂದಿದೆ, ಕುಂಟು ಎತ್ತು ಬಂದಿದೆ. ಜೋಳ ನೀಡ್ರಮ್ಮಾ ಎಂದು ಹೇಳುತ್ತಾರೆ. ಇನ್ನು ಹೆಣ್ಣು ಮಕ್ಕಳು ಹೇಳುತ್ತಾರೆ ಗೊಂಬಿ ಜೋಳ ಹಾಕಿಯಮ್ಮಾ ಅಂತ ಇಲ್ಲಿ ಹೆಣ್ಣು ಮಕ್ಕಳಿಗೂ ಮಣ್ಣಿನ ಮೂಲಕ ಗೊಂಬೆಯನ್ನು ರೆಡಿ ಮಾಡಿ ಕೊಟ್ಟಿರುತ್ತಾರೆ.. ಇದನ್ನು ಬಿಕ್ಷೇ ಬೇಡುವುದು ಎನ್ನಬಹುದು ಆದರೆ ಇದು ಒಂದು ಪದ್ಧತಿ ಇದು ಒಂದು ಭಕ್ತಿಯ ಹಬ್ಬವಾಗಿದೆ. ಇತ್ತೀಚಿಗೆ ಇದು ಕಣ್ಮೆರೆಯಾಗುತ್ತಿದ್ದು, ಮಕ್ಕಳು ಮೊಬೈಲ್ನತ್ತ ಅಭಿವೃದ್ಧಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.





