ನವದೆಹಲಿ: ಡಿಕೆಶಿ – ಅದಾನಿ ಭೇಟಿ ವಿಚಾರವಾಗಿ ಸಂಸದ ಪವನ್ ಖೇರಾ ಪ್ರತಿಕ್ರಿಯಿಸಿದ್ದಾರೆ.ನಮ್ಮ ಹೋರಾಟ ಏಕಸ್ವಾಮ್ಯದ ವಿರುದ್ಧವೇ ಹೊರತು ಉದ್ಯಮಿಗಳ ವಿರುದ್ಧವಲ್ಲ ಎಂದು ತಿಳಿಸಿದ್ದಾರೆ.
ನಾವು ಯಾವುದೇ ನಿರ್ದಿಷ್ಟ ಉದ್ಯಮಿಯ ವಿರುದ್ಧವಿಲ್ಲ, ಆದರೆ ಯಾವುದೇ ಒಬ್ಬ ಉದ್ಯಮಿಗೆ ಸಂಪೂರ್ಣ ಏಕಸ್ವಾಮ್ಯ ಸಿಕ್ಕರೆ ಅದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಕಾಂಗ್ರೆಸ್ ನಿಲುವು ಎಂದು ಸಂಸದ ಪವನ್ ಖೇರಾ ತಿಳಿಸಿದ್ದಾರೆ.
ಗೌತಮ್ ಅದಾನಿ ಅವರು ಬೆಂಗಳೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು. ಈ ಬಗ್ಗೆ ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ಅವರು, ನಮ್ಮ ಹೋರಾಟ ಏಕಸ್ವಾಮ್ಯದ ವಿರುದ್ಧವೇ ಹೊರತು ಉದ್ಯಮಿಗಳ ವಿರುದ್ಧವಲ್ಲ ಎಂದು ತಿಳಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ಗೌತಮ್ ಅದಾನಿ ಅವರಿಗೆ ಇಲ್ಲಿ ಹಲವು ಉದ್ಯಮಗಳಿವೆ. ನಾನು ಮೊದಲ ಬಾರಿ ಸಿಎಂ ಆಗಿರುವುದರಿಂದ ಸೌಜನ್ಯಯುತ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದರು.
ಟೆಂಡರ್ ಅಂತಿಮಗೊಳ್ಳುವ ಮುನ್ನವೇ ಸಂಸ್ಥೆಯು ಸುರಂಗ ಮಾರ್ಗ ಹಾದುಹೋಗುವ ಸ್ಥಳಗಳಲ್ಲಿ ಅಗತ್ಯವಿರುವ ಪ್ರಾಥಮಿಕ ಭೂ ಸಮೀಕ್ಷೆ ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ಪ್ರಮುಖ ತಾಂತ್ರಿಕ ಪರೀಕ್ಷೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವೆ ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸರ್ಕಾರ ಅಂದಾಜು 17,698 ಕೋಟಿ ವೆಚ್ಚ ನಿಗದಿಪಡಿಸಿತ್ತು.
ಸದಾಶಿವನಗರದಲ್ಲಿರುವ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಗೌತಮ್ ಅದಾನಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಸುಮಾರು 20 ನಿಮಿಷಗಳ ಚರ್ಚೆ ನಡೆಸಿದ್ದರು. ಬೆಂಗಳೂರಿನ ಉದ್ದೇಶಿತ ಸುರಂಗ ಮಾರ್ಗ ಯೋಜನೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.
ಅದಾನಿ ಸಂಸ್ಥೆಯು ಗುತ್ತಿಗೆ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಅಧಿಕೃತವಾಗಿ ಕಾಮಗಾರಿ ವಹಿಸುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ವೆಚ್ಚ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ, ಗೌತಮ್ ಅದಾನಿ ಅವರ ಈ ಭೇಟಿ ಮತ್ತು ಚರ್ಚೆ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆದಿದೆ.
ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಸಂಸ್ಥೆಯು 22,267 ಕೋಟಿ ರೂ. ಮೊತ್ತವನ್ನು ನಮೂದಿಸಿ ಅತಿ ಕಡಿಮೆ ಬಿಡ್ ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಸರ್ಕಾರದ ಅಂದಾಜು ಮೊತ್ತಕ್ಕಿಂತ ಇದು ಹೆಚ್ಚಾಗಿದ್ದರೂ, ಬಿಡ್ಡಿಂಗ್ನಲ್ಲಿ ಭಾಗವಹಿಸಿದ್ದ ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ಅದಾನಿ ಸಂಸ್ಥೆಯ ಮೊತ್ತವೇ ಕಡಿಮೆಯಾಗಿದೆ ಎನ್ನಲಾಗಿದೆ.





