ಸಚಿವರು ಸೂಚಿಸಿದ್ರೇ ಬೀದಿ ದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಜಿಬಿಎ ಕಾರ್ಯಪಾಲಕ ಅಭಿಯಂತರ ಅಮಾನತು

ಬೆಂಗಳೂರು: ಬೀದಿ ದೀಪಗಳ ನಿರ್ವಹಣೆಯಲ್ಲಿ ಗಂಭೀರ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ (ವಿದ್ಯುತ್) ಹೆಚ್. ವಿ. ರಮೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಚಿವರ ದಿಢೀರ್ ಪರಿವೀಕ್ಷಣೆ ಮತ್ತು ಕರಾಳ ಸತ್ಯ ಬಯಲು

ದಿನಾಂಕ 28.08.2026ರ ಸಂಜೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಯಲ್ಲಿ ಖುದ್ದಾಗಿ ವಿದ್ಯುತ್ ಬೀದಿ ದೀಪಗಳ ಪರಿವೀಕ್ಷಣೆ ನಡೆಸಿದರು. ಈ ವೇಳೆ ಒಟ್ಟು 222 ವಿದ್ಯುತ್ ಕಂಬಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 140 ಕಂಬಗಳಲ್ಲಿ ದೀಪಗಳು ಕಾರ್ಯನಿರ್ವಹಿಸದೆ ಕತ್ತಲು ಆವರಿಸಿರುವುದು ಸಚಿವರ ಪರಿಶೀಲನೆಯಲ್ಲಿ ಕಂಡುಬಂದಿದೆ.

ಮುನ್ನೆಚ್ಚರಿಕೆ ಹಾಗೂ ಸೂಚನೆಗಳ ಸ್ಪಷ್ಟ ಉಲ್ಲಂಘನೆ

ಈ ಸಂಬಂಧ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಈಗಾಗಲೇ ಎರಡು ಬಾರಿ ಸಭೆಗಳನ್ನು ನಡೆಸಿ, ಬೀದಿ ದೀಪಗಳ ನಿರ್ವಹಣೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ವಿಶೇಷವಾಗಿ 04-08-2026ರಂದು ನಡೆದ ಸಭೆಯಲ್ಲೂ ಸಹ ಸಚಿವರು ಈ ವಿಷಯದ ಬಗ್ಗೆ ಹೆಚ್ಚು ಗಮನಹರಿಸುವಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರು.

ಸಚಿವರ ಆದೇಶಕ್ಕೆ ಬೆಲೆ ಇಲ್ಲದಂತಾದ ಪರಿಣಾಮ

ಉನ್ನತ ಮಟ್ಟದ ಸಚಿವರ ಸೂಚನೆ ಹಾಗೂ ನಿರ್ದೇಶನಗಳನ್ನು ಹೆಚ್. ವಿ. ರಮೇಶ್ ಅವರು ಗಂಭೀರವಾಗಿ ಪರಿಗಣಿಸದೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಸಚಿವರ ಆದೇಶವನ್ನು ಕಡೆಗಣಿಸಿ ಕರ್ತವ್ಯದಲ್ಲಿ ಲೋಪವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others