ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಹಾಗೂ ಸಚಿವ ಬಿ. ನಾಗೇಂದ್ರ ಅವರಿಗೆ ವಾಲ್ಮೀಕಿ ಸಮಾಜದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಯಾಕೆ ಸಲ್ಲಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ರೂ. ಲೂಟಿಯ ಹಗರಣದಲ್ಲಿ ನಾಗೇಂದ್ರ ಅವರು ಆರೋಪಿ. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ತನಿಖೆ ಆರಂಭವಾಗಿದ್ದು, ತೆಲಂಗಾಣಕ್ಕೆ ಹಣ ವರ್ಗಾವಣೆಯಾಗಿ ದುರುಪಯೋಗ ಆಗಿರುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಬಿಜೆಪಿಗೆ ನಾಗೇಂದ್ರರ ಬಗ್ಗೆ ದ್ವೇಷ ಇಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ತಾವು ರಾಜೀನಾಮೆ ಕೊಡುವ ಪ್ರಸಂಗ ಯಾಕೆ ನಿರ್ಮಾಣವಾಯಿತೆಂದು ನಾಗೇಂದ್ರ ಅವರೇ ತಿಳಿಸಬೇಕು.
ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಅಪರಾಧಿ ಸ್ಥಾನದಿಂದ ಅವರಿನ್ನೂ ಹೊರಬಂದಿಲ್ಲ. ನಿರಪರಾಧಿ ಎಂದು ಸಾಬೀತಾದ ಬಳಿಕ ಅವರು ಸಚಿವರಾದರೆ ನಮ್ಮದೇನೂ ಅಭ್ಯಂತರವಿಲ್ಲ. ನಾಗೇಂದ್ರ ಅವರೇ ಅಂಥ ಘೋರ ಆಪಾದನೆ, ಆರೋಪ ನಿಮ್ಮ ಮೇಲಿದ್ದ ಸಂದರ್ಭದಲ್ಲಿ ಈ ರೀತಿ ಜಾತಿ ಹೆಸರು ಹೇಳಿಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡದಿರಿ ಎಂದು ತಿಳಿಸಿದರು.
ಇವತ್ತಿಗೂ ಆ ಬಡ ಕುಟುಂಬಕ್ಕೆ ಗ್ರಾಚ್ಯುಟಿ, ಪಿಂಚಣಿ ಬಂದಿಲ್ಲ. ಅವರ ಮಗನಿಗೆ ಈ ಕಾಂಗ್ರೆಸ್ ಸರಕಾರ ಜವಾನನ ಕೆಲಸ ಕೊಟ್ಟಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಅಧೀಕ್ಷಕರಾಗಿದ್ದರು. ಆದರೂ ಅವರ ಮಗನಿಗೆ ಜವಾನನ ಕೆಲಸ ಕೊಟ್ಟು ಅಪಮಾನ ಮಾಡಲಾಗಿದೆ ಎಂದು ಟೀಕಿಸಿದರು.
ಬಿಹಾರದ ಮುಖ್ಯಮಂತ್ರಿ ಜಾಮೀನಿನಲ್ಲಿದ್ದರೆ ಕಾಂಗ್ರೆಸ್ಸಿನವರು ಅಲ್ಲಿ ಹೋರಾಟ ಮಾಡಲಿ; ಪ್ರಶ್ನೆಯನ್ನು ಎತ್ತಲಿ ಎಂದು ತಿಳಿಸಿದರು. ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಧರ್ಮಪತ್ನಿಯ ಹೇಳಿಕೆಯನ್ನೂ ಗಮನಿಸಬೇಕಿದೆ ಎಂದು ಹೇಳಿದ್ದಾರೆ.





