ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತಾಂಡವ ಆಡ್ತಿದೆ. ಆದರೆ ಸರ್ಕಾರ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಬರ ಘೋಷಿಸಿದರೆ ಮಾತ್ರ ಕೇಂದ್ರದಿಂದ ನೆರವು ಸಿಗಲಿದೆ. ಆದರೆ ಸರ್ಕಾರ ಅದಕ್ಕೂ ಮುಂದಾಗುತ್ತಿಲ್ಲ. ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಮಳೆ ಕೊರತೆ ಇದ್ದರೂ ಇನ್ನೂ ಬರ ಘೋಷಣೆ ಮಾಡಿಲ್ಲ ಎಂದಿದ್ದಾರೆ.
ರೈತರಿಗೆ ಬೋರ್ವೆಲ್ಗಳಿಗೆ ವಿದ್ಯುತ್ ಸಿಗುತ್ತಿಲ್ಲ. ರಾಜ್ಯದ ಹಲವು ಕೆರೆಗಳು ಸಂಪೂರ್ಣ ಬತ್ತಿವೆ. ವಿದ್ಯುತ್ ಕೊರತೆಯೂ ಎದುರಾಗಿದೆ.. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣ ಬರ ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಪ್ರತಿ ತಾಲ್ಲೂಕಿಗೆ ಬರ ನಿರ್ವಹಣೆಗೆ 20 ಕೋಟಿ ರೂ ಬಿಡುಗಡೆ ಮಾಡಬೇಕು.ಸಾಲಮನ್ನಾ ಘೋಷಿಸಬೇಕು. ಬೇರೆ ರಾಜ್ಯಗಳಿಗೆ ನೀರು ಬಿಡುವುದನ್ನು ತಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸಿಎಂ ಮತ್ತು ಡಿಸಿಎಂ ಬೆಳೆ ಬೆಳೆಯಬೇಡಿ ಎನ್ನುತ್ತಿದ್ದಾರೆ. ಹಾಗಾದರೆ ರೈತರು ಏನು ಮಾಡಬೇಕು? ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುತ್ತೀರಾ ಎಂದು ಪ್ರಶ್ನಿಸಿದರು
ಕಾಂಗ್ರೆಸ್ ಬಿಜೆಪಿ ನೋಡಿ ಕಲಿಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಪರಿಹಾರ ನೀಡಲಾಗಿತ್ತು. ಈಗ ಸರ್ಕಾರ ಬರ ಘೋಷಣೆ ಮಾಡುವಲ್ಲಿಯೂ ವಿಳಂಬ ಮಾಡುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ರೈತರು ದನ-ಕರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಕಾಂಗ್ರೆಸ್ ನಾಯಕರು, ಶಾಸಕರು ದೆಹಲಿಯಲ್ಲಿ ಜಾಲಿ ಅಂತ ಟ್ರಿಪ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ.80ರಷ್ಟು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಎಂದು ವಿಶಾದ ವ್ಯಕ್ತಪಡಿಸಿದರು.




