ರಾಜ್ಯದ ಕೆಲವು ಭಾಗಗಳಲ್ಲಿ ವರುಣಾಬ್ಬರ ಮುಂದುವರೆದಿದ್ದು, ಮಳೆಯ ಪರಿಣಾಮಕ್ಕೆ ಕೆರೆ ನದಿಗಳು ತುಂಬಿವೆ. ಇನ್ನು ಹಲವು ಕಡೆ ಮರಗಳು ಧರೆ ಉರುಳಿದ್ದು,ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಉತ್ತಮ ಮಳೆಯ ಮುನ್ಸೂಚನೆ ಇದ್ದು 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮುಂದಿನ ಮೂರು ಗಂಟೆಯಲ್ಲಿ ಅಂದರೆ ಭಾನುವಾರ ಸಂಜೆ ವೇಳೆಗೆ ಕರಾವಳಿಯ ಎರಡು ಜಿಲ್ಲೆಗೆ ಮಳೆಯ ಅಲರ್ಟ್ ನೀಡಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ತುಂಬಿದ್ದು, ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ಮಳೆ ಕಡಿಮೆ ಇತ್ತು ಈ ಕಾರಣಕ್ಕೆ ಬರಗಾಲ ಆವಾರಿಸಿದೆ. ಇಂತಹ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿತ್ತು. ಜೊತೆಗೆ ಜೂನ್ ತಿಂಗಳಲ್ಲಿ ಜಲಾಶಯದಲ್ಲಿ ಕೇವಲ 2 ಟಿಎಂಸಿ ಮಾತ್ರ ನೀರು ಉಳಿದಿತ್ತು. ಇದೇ ಸಮಯದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾದ ಕಾರಣ ಅಪಾರ ಪ್ರಮಾಣದ ನೀರು ಜಾಲಶಯಕ್ಕೆ ಹರಿದು ಬಂದಿದೆ. ಇದರಿಂದ ಆಲಮಟ್ಟಿ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ಬಹದ್ದೂರ್ ಶಾಸ್ತ್ರೀ ಜಲಾಶಯ ಒಟ್ಟು 519.60 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಸದ್ಯ 519.46 ಮೀ. ನೀರು ಭರ್ತಿಯಾಗಿದೆ. ಕಂಗಾಲಾಗಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅತಿಯಾಗಿದ್ದು ರೈತ ಮುಖದಲ್ಲಿ ಸಂತಸ ತಂದಿದೆ.





