ಮುಂಗಾರು ಆರಂಭವಾದ್ರೂ ಮಂಡ್ಯದಲ್ಲಿಲ್ಲ ಮಳೆ: 81 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ!

ಮಂಡ್ಯ: ಮುಂಗಾರು ಮಾರುತಗಳು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದರೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಯ ಅಭಾವದಿಂದಾಗಿ ಸಕ್ಕರೆ ನಾಡಿನ ಜೀವನಾಡಿ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಒಣಗುತ್ತಿದ್ದು, ಬರಿದಾಗುವ ಹಂತ ತಲುಪಿದೆ. ಜೂನ್ ತಿಂಗಳು ಆರಂಭವಾದರೂ ವರುಣದೇವ ಕೃಪೆ ತೋರದಿರುವುದು ಕೃಷಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ದಾಖಲೆಯ ರಣ ಬಿಸಿಲಿನ ಬೆನ್ನಲ್ಲೇ ಮುಂಗಾರು ಮಳೆಯೂ ಕೈಕೊಟ್ಟಿರುವುದರಿಂದ ಜಲಾಶಯದ ಒಳಹರಿವು ಸಂಪೂರ್ಣವಾಗಿ ಕುಸಿದಿದೆ. ಸದ್ಯ ಹನಿ ಹನಿಯಾಗಿ ನೀರು ಖಾಲಿಯಾಗುತ್ತಿರುವುದು ರೈತರ ನಿದ್ದೆ ಗೆಡಿಸಿದೆ.

ಬಂಡೆಗಳು, ಮುಳುಗಿದ್ದ ದೇಗುಲ ಪ್ರತ್ಯಕ್ಷ: ಡ್ಯಾಂನಲ್ಲಿ ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ತಗ್ಗಿರುವುದರಿಂದ ಹಿಂದೆ ಕಾವೇರಿ ಒಡಲಿನಲ್ಲಿ ಮುಳುಗಿ ಹೋಗಿದ್ದ ಪುರಾತನ ಇತಿಹಾಸ ಪ್ರಸಿದ್ಧ ದೇವಾಲಯ ಮತ್ತು ಬೃಹತ್ ಬಂಡೆಗಳು ಈಗ ನದಿಯ ಮಧ್ಯೆ ದರ್ಶನ ನೀಡುತ್ತಿವೆ. ಜಲಾಶಯದಲ್ಲಿ ನೀರು ತಳ ಮುಟ್ಟಿರುವುದಕ್ಕೆ ಇದು ನೇರ ಸಾಕ್ಷಿಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮಂಡ್ಯ, ಮೈಸೂರು ಮಾತ್ರವಲ್ಲದೆ ಕೋಟ್ಯಂತರ ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಲೆಕ್ಕಾಚಾರ: ಜಲಾಶಯದ ಇಂದಿನ ನಿಖರವಾದ ತಾಂತ್ರಿಕ ವಿವರಗಳು ಈ ಕೆಳಗಿನಂತಿವೆ:

  • ಗರಿಷ್ಠ ಸಾಮರ್ಥ್ಯ: 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ: 81.36 ಅಡಿ
  • ಸದ್ಯದ ನೀರಿನ ಒಟ್ಟು ಸಂಗ್ರಹ: 11.399 ಟಿಎಂಸಿ (TMC)
  • ಡ್ಯಾಂ ಒಳಹರಿವು: 581 ಕ್ಯೂಸೆಕ್
  • ಡ್ಯಾಂ ಹೊರಹರಿವು: 436 ಕ್ಯೂಸೆಕ್

ಡ್ಯಾಂನ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಸದ್ಯ ಕೇವಲ 81 ಅಡಿಯಷ್ಟು ನೀರು ಮಾತ್ರ ಬಾಕಿ ಉಳಿದಿದೆ. ಕಾವೇರಿಯ ಉಗಮ ಸ್ಥಾನ ಕೊಡಗು ಮತ್ತು ಜಲಾನಯನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಚುರುಕುಗೊಂಡು ಭಾರಿ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.

Share it :

Leave a Reply

Your email address will not be published. Required fields are marked *