ನವದೆಹಲಿ: ಈ ಸಲ ಗಣಪ ಹಬ್ಬಕ್ಕೆ ಬದಲಾವಣೆಯನ್ನು ಮಾಡಿಕೊಳ್ಳಿ, ಗಣೇಶ ಚತುರ್ಥಿ ಹಬ್ಬದಂದು ಪ್ರತಿಯೊಬ್ಬರು ನಿಮ್ಮ ಮನೆಗಳಲ್ಲಿ ಸ್ಥಳೀಯ ಮಣ್ಣಿನಿಂದಲೇ ತಯಾರಾದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘ಮನ್ ಕಿ ಬಾತ್’ನ136 ನೇ ಸಂಚಿಕೆ ಉದ್ದೇಶಿಸಿ ಮಾತನಾಡಿದ ಅವರು, ಪಿಒಪಿ ಗಣೇಶ ಮೂರ್ತಿ ಬಳಸಬೇಡಿ ಎಂದಿದ್ದು, ನನ್ನ ವಿನಂತಿಯನ್ನ ಪುನರುಚ್ಚರಿಸುತ್ತೇನೆ. ಈ ಗಣೇಶನ ಹಬ್ಬದಂದೂ ನಿಮ್ಮ ಮನೆಯಲ್ಲಿ ಸ್ಥಳೀಯ ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವನ್ನ ಸ್ಥಾಪಿಸಿ ಮತ್ತು ಆ ಮೂರ್ತಿಯನ್ನು ಪೂಜಿಸಿ ಎಂದು ಹೇಳಿದ್ದಾರೆ.
POP ನಿಂದ ತಯಾರಿಸಲಾದ ಗಣೇಶ ಮೂರ್ತಿಯಾಗಲೀ ಅಥವಾ ವಿದೇಶದಿಂದ ಬಂದ ಗಣೇಶನ ಪ್ರತಿಮೆಯೇ ಆಗಿರಲಿ ಅದರ ಬದಲು ನಾವು ನಮ್ಮದೇ ದೇಶದ ಮಣ್ಣಿನಿಂದ ತಯಾರಿಸಲಾದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು.ನಿಮ್ಮ ಈ ಪ್ರಯತ್ನವು ಪ್ರಕೃತಿಯನ್ನು ಆರಾಧಿಸುವ ಒಂದು ರೂಪವೂ ಆಗಿರುತ್ತದೆ ಎಂದು ಸೂಚಿಸಿದ್ದಾರೆ.
ಕಳೆದ ಬಾರಿ ಮನ್ ಕಿ ಬಾತ್ ನಲ್ಲಿ ನಾನು ‘ಗಣೇಶ ಹಬ್ಬದ’ ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ನಾವು ನಮ್ಮ ದೇಶದ ಮಣ್ಣಿನಿಂದಲೇ ತಯಾರಿಸಲಾದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಬೇಕೆಂದು ನಾನು ಮನವಿ ಮಾಡಿದ್ದೆ.
ಈ ವಿಷಯವನ್ನ ಈಗಾಗಲೇ ʻಮನ್ ಕಿ ಬಾತ್ʼ ನಲ್ಲಿ ಚರ್ಚಿಸಲಾಗಿದೆ ಮತ್ತು ಅದು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ ಎಂದು ಜನರು ಬರೆದಿದ್ದಾರೆ ಎಂದು ಸ್ಮರಿಸಿದರು.
ಈ ಮಾಹಿತಿ ಕುರಿತಂತೆ ಅನೇಕರು ನನಗೆ ಸಂದೇಶ ಕಳಿಸಿದ್ದು, ಮತ್ತು ತಮ್ಮ ಚಿಂತನೆಗಳನ್ನು ತಿಳಿಯಪಡಿಸಿದ್ದಾರೆ. ತಾವು ನನ್ನ ಈ ಮನವಿಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಮಣ್ಣಿನಿಂದ ತಯಾರಿಸಲಾಗುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.





