ಶಿವಮೊಗ್ಗ: ಶರಾವತಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಪ್ರಸಿದ್ಧ ಜೋಗ ಜಲಪಾತಕ್ಕೆ ಭವ್ಯ ಕಳೆ ಬಂದಿದೆ. ನದಿಯಲ್ಲಿ ನೀರಿನ ಹರಿವು ರಭಸಗೊಂಡ ಪರಿಣಾಮ ಜಲಪಾತವು ತನ್ನ ಪೂರ್ಣ ವೈಭವದೊಂದಿಗೆ ಧುಮುಕುತ್ತಿದೆ.
ಮಳೆ ಹಾಗೂ ದಟ್ಟ ಮಂಜಿನ ನಡುವೆ ಮುಗಿಲೆತ್ತರದಿಂದ ಧುಮುಕುತ್ತಿರುವ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಧಾರೆಗಳು ಹಾಲಿನ ಕೆನೆಯಂತೆ ಕಂಗೊಳಿಸುತ್ತಿದ್ದು, ಪ್ರಕೃತಿ ಪ್ರೇಮಿಗಳ ಮನಸೆಳೆಯುತ್ತಿವೆ. ಭಾನುವಾರ ರಜಾದಿನವಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನಸ್ತೋಮ ಜಲಪಾತದ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿತು. ಶನಿವಾರವೂ ಸಹ ಕರಾವಳಿ ಹಾಗೂ ಒಳನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ವೀಕ್ಷಕರು ಭೇಟಿ ನೀಡಿದ್ದರು.





