ಬೆಂಗಳೂರು: ಆರ್ಎಸ್ಎಸ್ ಬಗ್ಗೆ ಮಾತಾಡ್ತಿರಲ್ಲಾ, ಕಾಂಗ್ರೆಸ್ ನಾಯಕರು ಏನು ಪರಿಶುದ್ಧ ಮಾಡಿದ್ದೀರಾ? ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕೆಪಿಎಸ್ಸಿ ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ, ಈ ಸಂಸ್ಥೆ ಬೇಕಾ ಎಂದು ಜನ ಕೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ನೇಮಕಾತಿ ಯಾವ ರೀತಿ ಮಾಡಿದ್ದೀರಿ ಪ್ರಿಯಾಂಕ್ ಖರ್ಗೆ ಅವರೇ? ರೆಸಾರ್ಟ್ಗೆ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್ ಇಲ್ವಾ ಖರ್ಗೆ ಅವರೇ? ರಾಹುಲ್ ಗಾಂಧಿ ದೇಶವೆಲ್ಲ ಸುತ್ತಿ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಅವರನ್ನು ಇಲ್ಲಿ ಕರೆಸಿ, ನಮ್ಮ ರಾಜ್ಯದ ಯುವಕರ ಜೊತೆ ಸಂವಾದ ಮಾಡಲಿ ಎಂದು ಹರಿಹಾಯ್ದರು
ನಾನು ಕಡಿಮೆ ಅವಧಿಯಲ್ಲಿ ಸಿಎಂ ಆಗಿರಬಹುದು. ಕಾನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ಕಾನೂನು ಮೀರಿ ರಕ್ಷಣೆ ಕೊಡಿ ಅಂತ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತ ಸಮಾಜದವರೊಬ್ಬರಿಗೆ ಕೆಪಿಎಸ್ಸಿ ಅಧ್ಯಕ್ಷ ಮಾಡಿದೆ, ನನ್ನ ಸಂಬಂಧಿಕರಿಗಾಗಲೀ, ಆಪ್ತರಿಗಾಗಲೀ ಮಾಡಿಲ್ಲ. 2006ರಲ್ಲಿ ದಲಿತ ಸಮಾಜದವರಿಗೆ ಅಧ್ಯಕ್ಷ ಮಾಡಿದೆ ಎಂದರು.
ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್ಸಿ ರದ್ದು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅಧಿಕಾರ ಸಿಕ್ಕಿದೆಯಲ್ಲ ಮಾಡಿ, ಗೃಹ ಸಚಿವರಾಗಿ ನೀವೇನು ಮಾಡಿದ್ದೀರಿ ಹೇಳಿ? ವಿದ್ಯಾರ್ಥಿಗಳ ಬದುಕಿನಲ್ಲಿ ಕೆಪಿಎಸ್ಸಿ ಚೆಲ್ಲಾಟ ಆಡುತ್ತಿದೆ. ಅದರ ವಿರುದ್ಧ ದನಿ ಎತ್ತಲು ನಾವು ಸದಾ ಸಿದ್ಧ. ಕೆಪಿಎಸ್ಸಿ ಹಂತಹಂತವಾಗಿ ಕೆಳಮಟ್ಟಕ್ಕೆ ಹೋಗಿದೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ, ಸದೆ ಬಡಿತೀನಿ ಎಂದು ಸಿಎಂ ಹೇಳಿದ್ದರು. ಇಂಥ ಪರಿಸ್ಥಿತಿಯಲ್ಲಿರುವ ಕೆಪಿಎಸ್ಸಿ ಸಂಸ್ಥೆಯನ್ನು ಏನು ಸದೆ ಬಡೆಯೋದು ಎಂದು ವಾಗ್ದಾಳಿ ನಡೆಸಿದರು.
ಜನವರಿ 1, 2024ರಲ್ಲಿ ಪ್ರಾವಿಷನ್ ಲಿಸ್ಟ್ ಸಿಎಸ್ಗೆ ಕಳುಹಿಸುತ್ತಾರೆ. ಆಗ ಅದನ್ನ ತಡೆಹಿಡಿಯಬೇಕು ಅಂತ ಹೇಳುತ್ತಾರೆ. ಇಲ್ಲಿವರೆಗೂ ಕೋರ್ಟ್ಗೂ ಅಬ್ಜೆಕ್ಷನ್ ಹಾಕಿಲ್ಲ ಸರ್ಕಾರ. ಒಎಂಆರ್ ತಿದ್ದಿದ್ದಾರೆ, ಸಿಸಿ ಕ್ಯಾಮೆರಾ ಇಲ್ಲಾ, ಫೂಟೇಜ್ ಹಾಳು ಮಾಡಿದ್ದಾರೆ. ಹೈಕೋರ್ಟ್ ಮುಂದೆ ಅಬ್ಜೆಕ್ಷನ್ ಹಾಕಿದ್ರಾ? ಪ್ರತಿಬಾರಿ ಕೋರ್ಟ್ನಲ್ಲಿ ಸಮಯ ಯಾಕೆ ಕೇಳಿದ್ರಿ ಪ್ರಿಯಾಂಕ್ ಖರ್ಗೆಯವರೆ? ಬಿಡದಿ ಟೌನ್ ಶಿಪ್ ಯೋಜನೆಗೆ ಆರು ಜನ ವಕೀಲರನ್ನ ಇಟ್ಟಿದ್ದಾರೆ. ಕಳೆದ ಆಗಸ್ಟ್ನಲ್ಲೂ ಕೋರ್ಟ್ಗೆ ಸಮಯ ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಯೋಗ್ಯತೆ ಇಲ್ಲದವರಿಗೆ ಪರೀಕ್ಷೆ ಬರೆಯೋದಕ್ಕೆ ಅವಕಾಶ ಕೊಟ್ಟಿದ್ದಾರೆ, ನೇಮಕಾತಿ ಮಾಡಿದ್ದೀರಾ? ಆರ್ಎಸ್ಎಸ್ ಬಗ್ಗೆ ಮಾತಾಡ್ತಿರಲ್ಲಾ, ಕಾಂಗ್ರೆಸ್ ನಾಯಕರು ಏನು ಪರಿಶುದ್ಧ ಮಾಡಿದ್ದೀರಾ? ಬಿಡಿಎ ಅರ್ಕಾವತಿ ಲೆಔಟ್ ನಾಶ ಮಾಡಿದವರಿಗೆ ಕೆಪಿಎಸ್ಸಿ ಚೇರ್ಮನ್ ಮಾಡ್ತಿರಾ? ಬೀದಿ ಬೀದಿಯಲ್ಲಿ ಒಂದು ಕೋಟಿ ತಗೊಂಡ್ರಲ್ಲಾ ಹೇಳಿ ಕಾಂಗ್ರೆಸ್ ನಾಯಕರೇ? 75 ಸಾವಿರ ಯುವಕರಿಗೆ ಉದ್ಯೋಗ ಕೊಡುತ್ತೇವೆ ಅಂತ ಹೇಳಿದ್ರಲ್ಲಾ, ಯಾವ ಆಧಾರದ ಮೇಲೆ ಸದಸ್ಯರನ್ನ ಆಯ್ಕೆ ಮಾಡುತ್ತಿದ್ದೀರಿ? ರಾಷ್ಟ್ರೀಯ ಅದ್ಯಕ್ಷರು ಯುವಕರ ಸಂವಾದ ಮಾಡುತ್ತಾರೆ. ಮುಂದಿನ ಪ್ರಧಾನಿ ಅಂತಾರಲ್ಲಾ ಕರೆಯರಿ ನಮ್ಮ ರಾಜ್ಯಕ್ಕೆ ಎಂದರು.





