ಬೆಂಗಳೂರಿನ ಸರ್ವಜ್ಞನಗರದ ಯುವಜನರ ಬದುಕಿನ ಪಯಣ ಶಾರ್ಟ್ ಡಾಕ್ಯುಮೆಂಟರಿಯಲ್ಲಿ ಅನಾವರಣ

ಬೆಂಗಳೂರು: ಸರ್ವಜ್ಞನಗರದ ಯುವಜನತೆಯ ಉತ್ಸಾಹ, ಕನಸುಗಳು, ಸಾಧನೆಗಳು ಮತ್ತು ಭವಿಷ್ಯದ ಆಶಯಗಳು ಇದೀಗ ಹೊಸ ಕಿರು ಸಾಕ್ಷ್ಯಚಿತ್ರದ ಮೂಲಕ ತೆರೆ ಮೇಲೆ ಮೂಡಿಬಂದಿವೆ. ಈ ಸಾಕ್ಷ್ಯಚಿತ್ರ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕ್ಷೇತ್ರದ ವಿವಿಧ ಭಾಗಗಳ ಯುವಜನರ ಬದುಕಿನ ಪಯಣವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಶಿಕ್ಷಣ, ಸಬಲೀಕರಣ, ಆರೋಗ್ಯ, ಅವಕಾಶಗಳು ಮತ್ತು ನಾಯಕತ್ವದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿರುವ ಯುವಜನರ ಅನುಭವಗಳು ಮತ್ತು ಆಶಯಗಳು ಇಲ್ಲಿ ಪ್ರತಿಬಿಂಬಿತವಾಗಿವೆ.

ಇದು ಕೇವಲ ವೈಯಕ್ತಿಕ ಕಥೆಗಳ ಸಂಕಲನವಲ್ಲ; ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು, ತಮ್ಮ ಧ್ವನಿಯನ್ನು ಕಂಡುಕೊಂಡು, ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿರುವ ಹೊಸ ತಲೆಮಾರಿನ ಚಿತ್ರಣವೂ ಹೌದು.

ಅಜೇಲಿಯಾ ಪ್ರೊಡಕ್ಷನ್ಸ್ ನಿರ್ಮಿಸಿ, ಚಲನಚಿತ್ರ ನಿರ್ದೇಶಕರಾದ ರೆನಿಟಾ ಜಾರ್ಜ್ ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರವು ಸರ್ವಜ್ಞನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಪರಿವರ್ತನೆಗಳನ್ನು ಮತ್ತು ಆ ಪಯಣದ ಕೇಂದ್ರಬಿಂದುವಾಗಿರುವ ಜನರ ಬದುಕನ್ನು ಪ್ರಾಮಾಣಿಕವಾಗಿ ದಾಖಲಿಸುತ್ತದೆ.

ಸಾಕ್ಷ್ಯಚಿತ್ರದ ಕುರಿತು ಮಾತನಾಡುತ್ತಾ ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಸರ್ವಜ್ಞನಗರ ಕ್ಷೇತ್ರದ ಶಾಸಕರಾದ ಶ್ರೀ ಕೆ.ಜೆ. ಜಾರ್ಜ್ ಅವರು, ವರ್ಷಗಳ ಕಾಲ ನಿರಂತರವಾಗಿ ನಡೆದ ತಳಮಟ್ಟದ ಪ್ರಯತ್ನಗಳು ಹೇಗೆ ನಿಧಾನವಾಗಿ ಬದಲಾವಣೆಯಾಗಿ ರೂಪುಗೊಳ್ಳುತ್ತವೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ ಎಂದು ಹೇಳಿದರು.

“ಈ ಕಥೆಗಳು ಒಂದೇ ದಿನದಲ್ಲಿ ರೂಪುಗೊಂಡದ್ದಲ್ಲ. ನಮ್ಮ ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಕಾರ್ಯಕ್ರಮಗಳಲ್ಲಿ ವರ್ಷಗಳ ಕಾಲ ನಡೆದ ನಿರಂತರ ಪ್ರಯತ್ನಗಳ ಫಲ ಇವು. ಆ ಕೆಲಸಕ್ಕೆ ಈ ಸಾಕ್ಷ್ಯಚಿತ್ರ ಕೇವಲ ಒಂದು ಕನ್ನಡಿಯಷ್ಟೇ.”

ಯುವ ಮನಸ್ಸುಗಳು, ಹೊಸ ಸಾಧ್ಯತೆಗಳು ಮತ್ತು ನಿರಂತರ ಪ್ರಯತ್ನದ ಮೌನಶಕ್ತಿ—ಇವೇ ಈ ಸಾಕ್ಷ್ಯಚಿತ್ರದ ಹೃದಯದಲ್ಲಿರುವ ಸಂದೇಶಗಳು. ಒಂದು ಸಮುದಾಯ ತನ್ನ ಜನರ ಮೇಲೆ ನಂಬಿಕೆ ಇಟ್ಟು, ಯುವಜನರಿಗೆ ಅವಕಾಶಗಳನ್ನು ಸೃಷ್ಟಿಸಿ, ಅವರ ಸಾಮರ್ಥ್ಯವನ್ನು ಬೆಳೆಸಿದಾಗ ಅರ್ಥಪೂರ್ಣ ಬದಲಾವಣೆ ಸಾಧ್ಯವಾಗುತ್ತದೆ ಎಂಬುದನ್ನು ಈ ಚಿತ್ರ ನೆನಪಿಸುತ್ತದೆ.

ಸರ್ವಜ್ಞನಗರದ ಯುವಜನರ ಧ್ವನಿ, ಕನಸುಗಳು ಮತ್ತು ಪಯಣವನ್ನು ಈ ಸಾಕ್ಷ್ಯಚಿತ್ರದ ಮೂಲಕ ಕಣ್ತುಂಬಿಕೊಳ್ಳಿ:

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others