ಬೆಂಗಳೂರು: ಬಿಜೆಪಿ ಅವರು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಮಾಡೋದ್ರಲ್ಲಿ ತಪ್ಪೇನು ಇಲ್ಲ. ಆದರೆ ಈಗ ಅದು ಮುಗಿದು ಹೋಗಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಶಾಸಕರ ಅಡ್ಡ ಮತದಾನ ವಿಚಾರದಲ್ಲಿ ಬಿಜೆಪಿಯಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರೋದು ಮುಗಿದು ಹೋಗಿರುವ ವಿಷಯ, ಈ ಸರ್ಕಾರದಲ್ಲಿ ಯಾರಿಗೆ ಬೇಕಾದ್ರೂ ಬ್ಲ್ಯಾಕ್ ಮೇಲ್ ಮಾಡ್ತಾರೆ. ಆಮಿಷ ಒಡ್ಡುವ ಎಕ್ಸ್ಪರ್ಟ್ಗಳು ಇದ್ದಾರೆ ಎಂದು ಸಿಡಿದರು.
ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಹೊಸದಲ್ಲ. ಜಾರ್ಖಂಡ್ನಲ್ಲಿ ಕಾಂಗ್ರೆಸ್ನಲ್ಲೇ ಕ್ರಾಸ್ ವೋಟಿಂಗ್ ಆಗಿದೆ. ಮ್ಯಾನ್ ಪವರ್, ಮಸಲ್ ಪವರ್, ಮನಿ ಪವರ್ ಎಲ್ಲಾ ಇದೆ. ಇದರಿಂದ ಬಿಜೆಪಿ ಸ್ನೇಹಿತರು ಆತಂಕಕ್ಕೆ ಒಳಗಾಗೋದು ಬೇಡ ಎಂದಿದ್ದಾರೆ.
ನಿಮ್ಮ ಕ್ಷೇತ್ರಕ್ಕೆ ಹಣ ಕೊಡ್ತೀವಿ ಅಂತ ಹಾಕಿರಬಹುದು. ಅಭಿವೃದ್ಧಿ ಹೆಸರಿನಲ್ಲಿ ಜನರ ಮುಂದೆ ಹೋಗೋಕೆ ಕೆಲವರು ಕ್ರಾಸ್ ವೋಟ್ ಮಾಡಿರಬಹುದು. ಈ ವಿಷಯ ಇಲ್ಲಿಗೆ ಬಿಡೋಣ. 2028ರಲ್ಲಿ ಈ ಕೆಟ್ಟ ಕಿತ್ತು ಹಾಕೋಕೆ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.
ನಮ್ಮ 17 ಶಾಸಕರ ಜೊತೆ ಮಾತಾಡಿದ್ದೇನೆ. 18ನೇ ಶಾಸಕರು ಹೊರಗೆ ಹೋಗಿ ಎರಡು ವರ್ಷ ಆಗಿದ್ದು, ಮೊನ್ನೆ ಸಿಎಂ ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಮಾತಾಡಿದೆ ಎಂದಿದ್ದಾರೆ. ಶಾಸಕರುಗಳಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿವಾಗಿದ್ದು, ಹಣ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾವು ಬೆಳೆಗಾರರ ಬಗ್ಗೆ ಮಾತನಾಡಿ, ಮಾವು ಬೆಳೆಗಾರರ ನೆರವಿಗೆ ಬರುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಕೋಲಾರದಲ್ಲಿ ಮಾವು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ನಾನು, ಪ್ರಹ್ಲಾದ್ ಜೋಷಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇವೆ ಎಂದರು.
ಈಗಾಗಲೇ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ರೈತರು ಆತಂಕ ಪಡೋದು ಬೇಡ. 2-3 ದಿನಗಳಲ್ಲಿ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಬಹುದಿದ್ದು, ಕೇಂದ್ರ ಸಚಿವರು ಭೋಪಾಲ್ನಲ್ಲಿ ಇದ್ದಾರೆ. ಅಲ್ಲಿಂದ ಬಂದ ಕೂಡಲೇ ಪರಿಹಾದ ಬಗ್ಗೆ ನಿರ್ಧಾರ ಮಾಡ್ತಾರೆ ಎಂದಿದ್ದಾರೆ.





