ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗೆ ತಾವು ಮತ ಹಾಕಿರುವುದಾಗಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬ ಅತೃಪ್ತ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ತಾವು ‘ಆತ್ಮಸಾಕ್ಷಿ ವೋಟ್’ ಚಲಾಯಿಸಿರುವುದಾಗಿ ಪ್ರಕಟಿಸಿದ್ದು, ಕೇಸರಿ ಪಡೆಗೆ ಭಾರಿ ಮುಖಭಂಗ ಉಂಟುಮಾಡಿದ್ದಾರೆ.
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, “ನನ್ನ ವೋಟ್ ಕಾಂಗ್ರೆಸ್ ಪರ ಚಲಾವಣೆಯಾಗಿದೆ. ಈ ನಿರ್ಧಾರವನ್ನು ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿಯೇ ತೆಗೆದುಕೊಂಡಿದ್ದೇನೆ,” ಎಂದು ಬಹಿರಂಗಪಡಿಸಿದರು.
ವಿಪಕ್ಷಗಳ ಅಲಕ್ಷ್ಯ, ಸಿಎಂ ಆಫರ್! ತಮ್ಮ ನಿಲುವಿಗೆ ಕಾರಣ ಬಿಚ್ಚಿಟ್ಟ ಸೋಮಶೇಖರ್, “ಬಿಜೆಪಿ ಅಥವಾ ಜೆಡಿಎಸ್ನ ಯಾವುದೇ ನಾಯಕರು ಮತ ನೀಡುವಂತೆ ನನ್ನನ್ನು ಸಂಪರ್ಕಿಸುವ ಸೌಜನ್ಯ ತೋರಲಿಲ್ಲ. ಕೇಳದವರಿಗೆ ಮತ ಹಾಕಲು ಹೇಗೆ ಸಾಧ್ಯ? ಆದರೆ, ಮುಖ್ಯಮಂತ್ರಿಗಳು ತಾವೇ ಖುದ್ದಾಗಿ ಫೋನ್ ಮಾಡಿ ಮತ ನೀಡುವಂತೆ ವಿನಂತಿಸಿದ್ದರು. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಯಶವಂತಪುರ ಕ್ಷೇತ್ರದ ಪ್ರಗತಿ ಮತ್ತು ಅನುದಾನಕ್ಕಾಗಿ ಮಾತ್ರ ನಾನು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಹೆಸರೇಳದ ಹೆಬ್ಬಾರ್: ಇದೇ ಹಾದಿ ಹಿಡಿದಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, “ನನ್ನ ಬಳಿಯೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದವರು ಮತ ಕೇಳಲು ಬರಲಿಲ್ಲ. ಬದಲಿಗೆ ಕಾಂಗ್ರೆಸ್ನವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಸಂಪರ್ಕಿಸಿ ಕ್ಷೇತ್ರದ ಅಭಿವೃದ್ಧಿಯ ಭರವಸೆ ನೀಡಿದ್ದರು. ಹಾಗಂತ ನಾನು ಕಾಂಗ್ರೆಸ್ಗೇ ಮತ ಹಾಕಿದ್ದೇನೆ ಎಂದು ಎಲ್ಲಿಯೂ ಹೇಳುವುದಿಲ್ಲ. ನನ್ನ ವೋಟ್ ಏನಿದ್ದರೂ ಆತ್ಮಸಾಕ್ಷಿಯ ವೋಟ್,” ಎಂದರು.
ಬಿಜೆಪಿ ಶಾಸಕರ ಈ ಬಹಿರಂಗ ಬಂಡಾಯ ಮತ್ತು ಕ್ರಾಸ್ ವೋಟಿಂಗ್ ನಡೆ, ಕಮಲ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.





