ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಬ್ಬರ ಜೋರಾಗಿದ್ದು, ಹಾಸನ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದರ ನಡುವೆ ಬಿರುಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ತಾಂತಯ್ಯ ಎಂಬುವವರು ಕುಟುಂಬಸ್ಥರೊಂದಿಗೆ ತಮ್ಮ ಜಮೀನಿನ ಬಳಿ ಮನೆಯಲ್ಲಿ ವಾಸವಾಗಿದ್ದು ಬಿರುಗಾಳಿ ಸಹಿತ ಮಳೆಗೆ ಮನೆ ಮೇಲೆ ಮರ ಬಿದ್ದಿದೆ
ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ವಾಸದ ಮನೆಗೆ ಹಾನಿಯಾಗಿದ್ದರುವುದರಿಂದ ಬಡ ಕುಟುಂಬಕ್ಕೆ ನಷ್ಟವಾಗಿದೆ.. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇವರ ಬೇಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ಏನು ಹೇಳುತ್ತಾರೆ ಎನ್ನುವುದು ಕಾದುನೋಡಬೇಕಿದೆ.
ಇನ್ನು ಇತ್ತ ಚಿಕ್ಕಮಗಳೂರಿನ ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ ಸುರಿಯುತ್ತಿದೆ. ಮಳೆಯ ಪರಿಣಾಮಕ್ಕೆ ಜನರು ಕಂಗಾಲಾಗಿದ್ದಾರೆ. ಮಳೆಯ ಹಿನ್ನೆಲೆ ಮೂಡಿಗೆರೆ ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕಳೆದ ವಾರದದಿಂದ ಮಲೆನಾಡಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು. ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ ಹೊರಡಿಸಿದ್ದಾರೆ.
ರಸ್ತೆಗೆ ಬೃಹತ್ ಮರಗಳು ಬಿದ್ದು, ಹತ್ತಾರು ಗ್ರಾಮಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಮಲೆನಾಡ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದೆ. ಭಾರೀ ಗಾಳಿಗೆ ಮರ ಬಿದ್ದು ಮಲೆನಾಡಿನಾದ್ಯಂತ ತೀವ್ರ ಅನಾಹುತ ಸಂಭವಿಸಿದೆ. ಭಾರಿ ಮಳೆ ಜೊತೆ ಬೀಸುತ್ತಿರುವ ರಣ ಗಾಳಿಗೆ ಮಲೆನಾಡಿಗರು ಕಂಗಾಲಾಗಿದ್ದಾರೆ.
ವರುಣಾಬ್ಬರಕ್ಕೆ ಜನ ಸುಸ್ತಾಗಿದ್ದು, ಹೊರ ಬರುವುದಕ್ಕೂ ಭಯಬೀಳುತ್ತಾ ಇದ್ದಾರೆ.





