ಬೆಂಗಳೂರು: ಓದಿದ ವ್ಯಕ್ತಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಬದಲು ಜಾತಿವಾದ ಪಾಲಿಸುವುದು ಹಾಗೂ ಮೌಢ್ಯ ಮತ್ತು ಮೂಢನಂಬಿಕೆಗಳಿಗೆ ಬದ್ಧರಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಮಾಜಿಕ ಸಮಾನತೆ ಮತ್ತು ವೈಚಾರಿಕ ಚಿಂತನೆ ಪ್ರತಿಪಾದಿಸುವ ಶೂದ್ರ ಸೇವಾ ಸಂಸ್ಥೆ ಎಂಬ ಸಂಘಟನೆ ಉದ್ಘಾಟಿಸಿ ಮಾತನಾಡಿದ ಅವರು, ‘ಚಾತುರ್ವರ್ಣ ವ್ಯವಸ್ಥೆಯನ್ನು ಮನುವಾದಿಗಳು ಈ ದೇಶದಲ್ಲಿ ಉದ್ದೇಶಪೂರ್ವಕಾಗಿ ಸೃಷ್ಟಿಸಿದ್ದಾರೆ ಎಂದರು.
ವಿದ್ಯಾವಂತ ಜನರು ಇನ್ನೂ ಸಂಪ್ರದಾಯವನ್ನು ಅನುಸರಿಸುತ್ತಾರೆ. ವ್ಯವಸ್ಥೆ ಬದಲಾವಣೆಗೆ ಎಲ್ಲರ ಪ್ರಯತ್ನ ಅಗತ್ಯ. ಅದಕ್ಕೆ ಸಮಯವೂ ಬೇಕು. ಸರಿಯಾದ ಮಾರ್ಗದಲ್ಲಿ ಹೋದಾಗಷ್ಟೇ ಯಶ ಸಿಗುತ್ತದೆ’ ಎಂದು ಹೇಳಿದ್ದಾರೆ.
ಎಲ್ಲಾ ಹಿಂದುಳಿದ ವರ್ಗಗಳು ಒಂದಾಗಬೇಕೆಂದು ಅವರು ಒತ್ತಾಯಿಸಿದರು, ರಾಜ್ಯ ಖಾತರಿ ಯೋಜನೆಗಳು ಅಸಮಾನತೆಯ ನಿರ್ಮೂಲನೆಗೆ ಸಕ್ರಿಯವಾಗಿ ಸಹಾಯ ಮಾಡುತ್ತವೆ .ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಮೂಢನಂಬಿಕೆ ವಿರೋಧಿ ಕಾನೂನು ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂದರು.
ಅಕ್ಷರ ವಂಚಿತರಾದ ಅವರಿಗೆ ಅಕ್ಷರ ಕಲಿತವರಿಂದ ಸೋಲಾಗುವುದು ಸಾಮಾನ್ಯ. ನಮ್ಮ ಭಿನ್ನಾಭಿಪ್ರಾಯಗಳ ಪರಿಣಾಮ ಬ್ರಿಟಿಷರೂ ನಮ್ಮನ್ನು ಆಳಿದರು. ಎಲ್ಲ ವರ್ಗಗಳಲ್ಲಿ ಒಗ್ಗಟ್ಟು ಮೂಡಬೇಕು’ ಎಂದರು.
ಶೂದ್ರ ವರ್ಗದವರು ಅನೇಕ ವರ್ಷಗಳ ಕಾಲ ಅಕ್ಷರ ಸಂಸ್ಕೃತಿ, ಅವಕಾಶಗಳಿಂದ ದೂರ ಇರುವಂತಾಗಿತ್ತು. ಅವರು ಮೇಲ್ವರ್ಗದವರೊಂದಿಗೆ ಸ್ಪರ್ಧಿಸುವುದು ಅಸಾಧ್ಯವಾಗಿದೆ ಎಂದು ಹೇಳಿದರು.
ಬುದ್ಧ, ಬಸವಣ್ಣ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರಂತಹ ಸುಧಾರಕರು ಸಂವಿಧಾನದಲ್ಲಿ ಕಲ್ಪಿಸಿರುವ ಸಮಾನತಾವಾದಿ ಸಮಾಜವನ್ನು ನಿರ್ಮಿಸುವುದು ಪ್ರಸ್ತುತ ಪೀಳಿಗೆಯು ಮೂಢನಂಬಿಕೆಗಳನ್ನು ತೊರೆದು ವೈಚಾರಿಕತೆಯನ್ನು ಅಳವಡಿಸಿಕೊಳ್ಳದ ಹೊರತು ಅಸಾಧ್ಯ ಎಂದು ತಿಳಿಸಿದ್ದಾರೆ.





