GOOD NEWS: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮರು ಪರಿಶೀಲನಾ ಅವಧಿ ಒಂದು ತಿಂಗಳು ವಿಸ್ತರಣೆ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯ ಅವದಿಯನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.
2023ರ ಜುಲೈ ತಿಂಗಳಲ್ಲಿ ಜಾರಿಗೊಂಡಿದ್ದ ಗೃಹ ಜ್ಯೋತಿ ಯೋಜನೆಯ ಪುನರ್‌ ಪರಿಶೀಲನಾ ಕಾರ್ಯ ನಡೆಯಲಿದ್ದು, ಜುಲೈ 1, 2026 ರಿಂದ ಗೃಹ ಜ್ಯೋತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್‌ 31ರವರೆಗೆ ಸರ್ಕಾರ ಅವದಿ ನಿಗದಿ ಮಾಡಿತ್ತು. ಇದೀಗ ಒಂದು ತಿಂಗಳ ಕಾಲ ಅವದಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಮೇ 2026ರ ಅಂತ್ಯಕ್ಕೆ 68,86,860 ಗೃಹ ಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್‌ 31ರವರೆಗೆ 46,70,588 ಫಲಾನುಭವಿಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಶೇಕಡಾ 70ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.

ಬೆಸ್ಕಾಂ ಮೀಟರ್‌ ರೀಡರ್‌ ಗಳು ಸೆಪ್ಟಂಬರ್‌ 1ರಿಂದ ವಿದ್ಯುತ್‌ ಸ್ಥಾವರಗಳ ಮೀಟರ್‌ ರೀಡಿಂಗ್‌ ಗೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಮೀಕ್ಷೆಗೆ ಬಾಕಿ ಉಳಿದಿರುವ ಫಲಾನುಭವಿಗಳು ದಾಖಲೆಗಳನ್ನು ನೀಡಿ ಸಹಕರಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.‌ ಶಿವಶಂಕರ ಮನವಿ ಮಾಡಿದ್ದಾರೆ.
ಬೆಂಗಳೂರು ನಗರದ ಕೆಲವು ಅಪಾರ್ಟ್‌ ಮೆಂಟ್‌ ಗಳಲ್ಲಿ ವಾಸವಾಗಿರುವ ಗೃಹ ಜ್ಯೋತಿ ಫಲಾನುಭವಿಗಳು ಸಮೀಕ್ಷೆ ಸಮಯದಲ್ಲಿ ಸಹಕಾರ ನೀಡದಿರುವುದು ಬೆಸ್ಕಾಂ ಗಮನಕ್ಕೆ ಬಂದಿದ್ದು, ಅಪಾರ್ಟ್‌ ಮೆಂಟ್‌ ಗಳಿಗೆ ಸಿಬ್ಬಂದಿ ಸಮೀಕ್ಷೆಗೆ ಬಂದಾಗ ಸಹಕರಿಸಬೇಕು ಎಂದು ಬೆಸ್ಕಾಂ ವಿನಂತಿಸಿದೆ.

ಡೋರ್‌ ಲಾಕ್‌ ಮನೆಗಳ ಸಮೀಕ್ಷೆಗೆ ಅವಕಾಶ

ಸಮೀಕ್ಷೆಗೆ ಮೀಟರ್‌ ರೀಡರ್‌ ಗಳು ಈ ಹಿಂದೆ ಮನೆಗೆ ಭೇಟಿ ನೀಡಿದ್ದರೂ ಕೆಲವು ಮನೆಗಳು ಡೋರ್‌ ಲಾಕ್‌ ಹಾಗೂ ಖಾಲಿ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮೊಬೈಲ್‌ ಆಪ್‌ ನಲ್ಲಿ ಡೋರ್‌ ಲಾಕ್‌ ಆಪ್ಶನ್‌ ನೀಡಲಾಗಿದೆ.

ಡೋರ್‌ ಲಾಕ್‌ (Door Lock) ಆಗಿರುವ ಮನೆಗಳಿಗೆ ಸಿಬ್ಬಂದಿಯವರು ಆಯಾ ಸ್ಥಾವರದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ DL ಎಂದು ನಮೂದಿಸಬೇಕು. ಪ್ರತಿಯೊಂದು ಡೋರ್‌ ಲಾಕ್‌ ಮನೆಗಳಿಗೆ ಸಿಬ್ಬಂದಿ ಬೇರೆ ಬೇರೆ ಸಮಯದಲ್ಲಿ ಮೂರು ಬಾರಿ ಭೇಟಿ ನೀಡಬೇಕು. ಪ್ರತಿ ಬಾರಿಯೂ ಆಕ್ಷಾಂಶ (Latitude) ಹಾಗೂ ರೇಖಾಂಶ (Longitude) ನಮೂದಿಸಿಕೊಳ್ಳಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಡೋರ್‌ ಲಾಕ್‌ ಆಗಿರುವ ಗ್ರಾಹಕರ ವಿವರಗಳನ್ನು ಆಪ್‌ ನಲ್ಲಿ ನಮೂದಿಸಿದ ತಕ್ಷಣ ಫಲಾನುಭವಿಗಳ ಮೊಬೈಲ್‌ಗೆ ಮೀಟರ್‌ ರೀಡರ್‌ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯ ಸಹಿತ ಮೂರು ಬಾರಿ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಡೋರ್‌ ಲಾಕ್‌ ಇರುವ ಮನೆಗಳ ಫಲಾನುಭವಿಗಳು ಮೀಟರ್‌ ರೀಡರ್‌ ನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಲು ಬೆಸ್ಕಾಂ ವಿನಂತಿಸಿದೆ.

ಅದೇ ರೀತಿ ಖಾಲಿ (VACANT) ಎಂದು ಗುರುತಿಸಬೇಕಾದ ಸ್ಥಾವರಗಳಿಗೆ ಸಂಬಂಧಿಸಿದಂತೆ, ಸಿಬ್ಬಂದಿಯವರು ಆಯಾ ಸ್ಥಾವರದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಅಕ್ಷಾಂಶ ಮತ್ತು ರೇಖಾಂಶ ಗುರುತು ಮಾಡಿಕೊಂಡ ನಂತರವೇ ಆಪ್‌ ನಲ್ಲಿ ಖಾಲಿ (VACANT) ಎಂದು ಆಪ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ.
ಸಮೀಕ್ಷೆ ಕುರಿತು ಮಾಹಿತಿ ಪಡೆಯಲು ಬೆಸ್ಕಾಂ ನಿಗಮ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದ್ದು, 9480816111, 9480816112, 9480816113 ಮತ್ತು 9480816114 ಗೆ ಸಂಪರ್ಕಿಸಲು ಕೋರಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others