ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು: ಬೈರತಿ ಸುರೇಶ್

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡಬಾರದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏನೇ ಇದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇತಿಹಾಸದಲ್ಲಿ ಯಾವಾಗಲಾದರೂ ಸಿಎಂ ಹಾಗೂ ಕೇಂದ್ರ ಸಚಿವ ಬಹಿರಂಗ ಚರ್ಚೆ ಮಾಡಿದ್ದಾರಾ? ಅಲ್ಲಿ ಹೋಗಿ ಚರ್ಚೆಗೆ ಬನ್ನಿ ಅನ್ನೋದು ಸರಿನಾ? ರಾಜ್ಯದ ಘನತೆಗೆ ಧಕ್ಕೆ ಆಗುತ್ತೆ ಇದರಿಂದ ಎಂದು ವಾಗ್ದಾಳಿ ನಡೆಸಿದರು.

ಇತ್ತ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ಸುಳಿವನ್ನು ಕೊಟ್ಟ ಅವರು, ಕೇಂದ್ರ ಕಾರಣ ರಾಜ್ಯ ಕಾರಣ ಅಂತ ಮಾತಾಡಲ್ಲ. ಇಡೀ ದೇಶದಲ್ಲಿ ತೈಲ ದರ ಹೆಚ್ಚಾಗಿದೆ. ಅದಕ್ಕೆ ಅನುಪಾತವಾಗಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆ ಇದೆ. ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ. ಸಿಎಂ ಜತೆ ಮಾತಾಡ್ತೇವೆ, ಸರ್ಕಾರ ಏನು ತೀರ್ಮಾನ ತಗೊಳ್ಳುತ್ತೋ ಅದರ ಪ್ರಕಾರ ಹೆಚ್ಚಿಸಲಾಗುತ್ತೆ ಎಂದು ತಿಳಿಸಿದರು.

ಬಸ್ ಟಿಕೆಟ್ ದರ ಹೆಚ್ಚಳ ವಿರೋಧ ಮಾಡಲು ಇಲ್ಲಿ ಕಾರಣನೇ ಇಲ್ಲ. ಬಿಜೆಪಿಯವರಿಗೂ ತೈಲ ದರ ಹೆಚ್ಚಾಗಿರೋದು ಗೊತ್ತು. ನಮ್ಮ ಸಾರಿಗೆಯ ನಾಲ್ಕು ನಿಗಮಗಳೂ ನಷ್ಟದಲ್ಲಿ ನಡೀತಿವೆ. ಐದು ಸಾವಿರ ಕೋಟಿ ನಷ್ಟದಲ್ಲಿ ಸಾರಿಗೆ ನಿಗಮಗಳು ನಡೀತಿವೆ ಎಂದರು.

ಅದನ್ನು ಸರಿದೂಗಿಸಬೇಕಲ್ಲ, ಸಿಬ್ಬಂದಿಗೂ ವೇತನ ಕೊಡಬೇಕಲ್ಲ ಬಸ್‌ಗಳಿಗೆ ಡೀಸೆಲ್ ಹಾಕಿಸಬೇಕಲ್ಲ. ಚರ್ಚೆ ಮಾಡಿ ಟಿಕೆಟ್ ದರ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವಿದ್ಯಾರ್ಥಿಗಳ ಪಾಸ್‌ಗೆ ಸಮಸ್ಯೆ ಏನೂ ಆಗ್ತಿಲ್ಲ. ಸ್ಟ್ರೀಮ್ ಲೈನ್ ಮಾಡಿ ಪಾಸ್ ವಿತರಣೆ ಮಾಡ್ತೇವೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್ ಕೊಡ್ತೇವೆ ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *