ಬೆಂಗಳೂರು: ದೇಶದಲ್ಲೇ ತರಬೇತಿ ಪಡೆದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ‘ಸಾಯಿ ಸಿಂಫೋನಿ ಆರ್ಕೆಸ್ಟ್ರಾ’ ಜತೆಗೆ ಮುಂಬರುವ ದಿನಗಳಲ್ಲಿ ವಿನೂತನ ಸಂಗೀತ ಪ್ರಯೋಗಗಳನ್ನು ನಡೆಸುವುದಾಗಿ ಖ್ಯಾತ ಸಂಗೀತ ಮಾಂತ್ರಿಕ, ಗ್ರ್ಯಾಮಿ ಪುರಸ್ಕೃತ ರಿಕಿ ಕೇಜ್ ಪ್ರಕಟಿಸಿದ್ದಾರೆ.
ಸದ್ಗುರುಗಳ ನೇತೃತ್ವದಲ್ಲಿ ಬೆಳೆದುಬಂದಿರುವ ಈ ತಂಡವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಅವರು, ಭಾರತದ ಅನನ್ಯ ಸಂಸ್ಕೃತಿ ಮತ್ತು ಸಿಂಫೋನಿ ಕಲೆಯ ನಡುವೆ ಇರುವ ಆಳವಾದ ನಂಟನ್ನು ಬಿಡಿಸಿಟ್ಟರು.

ವಾದ್ಯಗಳ ಮೇಳೈಸುವಿಕೆಯಲ್ಲಿ ಭಾರತದ ಪ್ರತಿಬಿಂಬ
”ಜಾಗತಿಕ ಮಟ್ಟದ ಆರ್ಕೆಸ್ಟ್ರಾಗಳ ಜತೆ ಕಾರ್ಯನಿರ್ವಹಿಸುವಾಗಲೆಲ್ಲ ನನಗೆ ತಾಯ್ನಾಡಿನ ನೆನಪಾಗುತ್ತದೆ. ಸಿಂಫೋನಿಯ ಪ್ರತಿಯೊಂದು ವಾದ್ಯವೂ ತನ್ನದೇ ಆದ ಪ್ರತ್ಯೇಕ ಅಸ್ತಿತ್ವ ಮತ್ತು ನಾದವನ್ನು ಹೊಂದಿರುತ್ತದೆ. ಒಂದಕ್ಕೊಂದು ಸ್ಪರ್ಧಿಸದೆ, ಎಲ್ಲವೂ ಒಂದಾಗಿ ಬೆರೆತಾಗ ಮಾತ್ರ ಅಲ್ಲಿ ದೈವಿಕ ಸಂಗೀತ ಮೊಳಗಲು ಸಾಧ್ಯ. ನಮ್ಮ ಭಾರತವೂ ಅಷ್ಟೇ; ವಿಭಿನ್ನ ಭಾಷೆ, ಆಚಾರ-ವಿಚಾರ ಮತ್ತು ನಂಬಿಕೆಗಳು ಒಗ್ಗೂಡಿ ದೇಶದ ಶ್ರೀಮಂತ ಸಂಸ್ಕೃತಿಯನ್ನು ನಿರ್ಮಿಸಿವೆ” ಎಂದು ಕೇಜ್ ತಿಳಿಸಿದರು.
ನೂರಕ್ಕೂ ಅಧಿಕ ಕೋಟಿ ಜನರಿರುವ ನಮ್ಮ ದೇಶದಲ್ಲಿರುವ ಏಕೈಕ ಸಿಂಫೋನಿ ಆರ್ಕೆಸ್ಟ್ರಾ ಇದಾಗಿದ್ದು, ಇದರ ಹಿರಿಮೆಯನ್ನು ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು ಎಂದು ಅವರು ಪ್ರತಿಪಾದಿಸಿದರು.

ವಿಷಮುಕ್ತ ಸಾವಯವ ಕೃಷಿಯೇ ಕ್ಯಾನ್ಸರ್ಗೆ ಮದ್ದು: ಸದ್ಗುರು ಮಧುಸೂದನ ಸಾಯಿ
ಕ್ಯಾನ್ಸರ್ ಕೇವಲ ವ್ಯಸನಗಳಿಂದ ಮಾತ್ರವಲ್ಲದೆ ಪರಿಸರ ಮಾಲಿನ್ಯ ಮತ್ತು ರಾಸಾಯನಿಕಯುಕ್ತ ಆಹಾರ ಪದ್ಧತಿಯಿಂದಲೂ ತೀವ್ರವಾಗಿ ಹರಡುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಎಚ್ಚರಿಕೆ ನೀಡಿದ್ದಾರೆ.
‘ದಿವ್ಯ ಸಂಜೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ದೈನಂದಿನ ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಮಾರಕ ರೋಗಗಳನ್ನು ದೂರವಿಡಬಹುದು. ವಿಷಕಾರಿ ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಪ್ರಕೃತಿದತ್ತ ಸಾವಯವ ಕೃಷಿ ಪದ್ಧತಿಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ನಂತಹ ಗಂಭೀರ ಆರೋಗ್ಯ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.





