ಶ್ರೀರಂಗಪಟ್ಟಣ: ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಪಾಂಡವಪುರದ ಹೆಮ್ಮೆ ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿಯಿರುವ ಐತಿಹಾಸಿಕ ಗುಡ್ಡವು ಸೂಕ್ತ ನಿರ್ವಹಣೆ ಇಲ್ಲದೆ ಮದ್ಯಪಾನ, ಜೂಜು ತಾಣವಾಗಿ ಬದಲಾಗುತ್ತಿದೆ ಎಂದು ಪ್ರಾಧ್ಯಾಪಕ ಧನಂಜಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಿಕ್ಕಿಗೂ ರಮ್ಯ ತಾಣವಾಗಿರುವ ಈ ಗುಡ್ಡದ ಮೇಲೆ ನಿಂತರೆ ಮೇಲುಕೋಟೆ ಬೆಟ್ಟ, ಕುಂತಿಬೆಟ್ಟ, ಕರಿಘಟ್ಟ, ಚಾಮುಂಡಿ ಬೆಟ್ಟ, ಪಾಂಡವಪುರ ಸಕ್ಕರೆ ಕಾರ್ಖಾನೆ ಎಲ್ಲವೂ ಕಣ್ಣಿಗೆ ಹಬ್ಬ ಉಣಿಸುತ್ತವೆ. ಗುಡ್ಡದ ಮೇಲೆ ಪ್ರಾಚೀನ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಪಕ್ಕದಲ್ಲೇ ಅವಧೂತ ಮಠವೂ ಇದೆ.
ಅರ್ಧಕ್ಕೆ ನಿಂತ ಜೀರ್ಣೋದ್ಧಾರ: ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನ ಮತ್ತು ಕಟ್ಟಡಗಳನ್ನು ಊರಿನ ಪ್ರಜ್ಞಾವಂತ ವ್ಯಕ್ತಿಯೊಬ್ಬರು ಭಾಗಶಃ ಜೀರ್ಣೋದ್ಧಾರ ಮಾಡಿಸಿದ್ದರು. ಆದರೆ ಅವರು ಪೂರ್ಣಗೊಳ್ಳುವ ಮುನ್ನವೇ ನಿಧನರಾದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. 6 ಕಲ್ಲು ಕಂಬಗಳ 4 ಸುತ್ತಿನ ಸೌಧ, ಮರದ ನೆರಳಿನ ವಿಶ್ರಾಂತಿ ತಾಣ ನಿರ್ಮಿಸಲಾಗಿದ್ದರೂ, ಸೂಕ್ತ ನಿರ್ವಹಣೆ ಇಲ್ಲ.
ಪ್ರವಾಸಿಗರಿಗೆ ಆಶ್ರಯ ತಾಣ.ಇಲ್ಲಿ ಜನಸಾಮಾನ್ಯರು, ಪ್ರವಾಸಿಗರು, ಪಟ ಹಾರಿಸುವ ಸ್ಪರ್ಧೆಗಳು ನಡೆಯುತ್ತಿತ್ತು. ರೈಲ್ವೆ ಹಳಿ ಪಕ್ಕದಲ್ಲೇ ಹಾದು ಹೋಗುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಎಲ್ಲಾ ಅವಕಾಶಗಳಿವೆ.
ಸ್ಥಳೀಯರ ಅಳಲು : “ಗುಡ್ಡದ ಮೇಲೆ ಸಂಜೆ ವೇಳೆ ಮದ್ಯ ಸೇವನೆ, ಜೂಜು ನಡೆಯುತ್ತಿದ್ದು, ಪವಿತ್ರ ಸ್ಥಳಕ್ಕೆ ಅಪಮಾನವಾಗುತ್ತಿದೆ ಎನ್ನಲಾಗಿದೆ. ನಾಲ್ಕು ದಿಕ್ಕಿನಿಂದ ಬರುವ ಜನ ನಮ್ಮ ಊರಿನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ” ಎಂದು ಗ್ರಾಮದ ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಸಮರ್ಪಣ ಟ್ರಸ್ಟ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಒತ್ತಾಯ ಈ ಕೇಳಗಿನಂತಿವೆ.
- ಜಿಲ್ಲಾಡಳಿತ ಕೂಡಲೇ ಗುಡ್ಡವನ್ನು ವಶಕ್ಕೆ ಪಡೆದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು.
- ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಿ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು.
- ಪೊಲೀಸ್ ಗಸ್ತು ಹೆಚ್ಚಿಸಿ ಅಕ್ರಮ ಚಟುವಟಿಕೆ ತಡೆಯಬೇಕು.
- “ವಿಶ್ರಾಂತಿಧಾಮ” ಎಂಬ ಹೆಸರಿಗೆ ತಕ್ಕಂತೆ ಮಕ್ಕಳ ಆಟದ ಮೈದಾನ, ವೀಕ್ಷಣಾ ಗೋಪುರ ನಿರ್ಮಿಸಬೇಕು.
ಕೆ ಎಸ್ ಜಯಶಂಕರ್ ಅಧ್ಯಕ್ಷರು ಸಮರ್ಪಣ ಟ್ರಸ್ಟ್.





