ಬೆಂಗಳೂರು: ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಕುಸಿತ ಪ್ರಕರಣ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು,ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಮಕ್ಕಳ ತಲೆಯ ಮೇಲಿನ ಶಾಲೆಯ ಮೇಲ್ಛಾವಣಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿ ಅವರೇ, ವೇದಿಕೆಯನ್ನು ಮರೆತುಬಿಡಿ. ಘೋಷಣೆಗಳನ್ನು ಮರೆತುಬಿಡಿ. ಸಿದ್ಧಪಡಿಸಿದ ಭಾಷಣಗಳನ್ನು ಬದಿಗಿಡಿ ಎಂದರುʻ
ಕರ್ನಾಟಕಕ್ಕೆ ಬನ್ನಿ. ಈ ಶಾಲೆಯಲ್ಲಿ ನಿಂತು ಮಕ್ಕಳನ್ನು ನೋಡಿ. ಅವರ ಧ್ವನಿಯನ್ನು ಆಲಿಸಿ ಭಾರತಕ್ಕೆ ನ್ಯಾಯದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾರ್ಥಿಗಳಿಗೆ ಸುರಕ್ಷಿತ ತರಗತಿ ಕೊಠಡಿಯನ್ನು ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನ್ಯಾಯ ಎಲ್ಲಿದೆ? ಗ್ಯಾರಂಟಿಗಳು ಎಲ್ಲಿವೆ? ಆಡಳಿತ ಎಲ್ಲಿದೆ? ಎಂದು ನಂತರ ಭಾರತಕ್ಕೆ ಉತ್ತರಿಸಿ. ನೀವು ನಮಗೆ ಖಟಾಖಟ್ ನೀಡಿದ್ದೀರಿ. ಕರ್ನಾಟಕ ನಿಮಗೆ ಉತ್ತರ ನೀಡಿದೆ. ಖಟಾಖಟ್, ಮೇಲ್ಛಾವಣಿ ಕುಸಿದುಬಿದ್ದಿದೆ. ಇದೀಗ ಘೋಷಣೆಗಳಿಗಿಂತ ಮಿಗಿಲಾಗಿ ʻಛಾತ್ರೋಂ ಕಿ ಗೂಂಜ್ʼ ಮೊಳಗಲಿ ಮತ್ತು ಇಡೀ ದೇಶ ಅದನ್ನು ಕೇಳಲಿ ಎಂದು ಒತ್ತಾಯಿಸಿದರು.
ಇವರು ಪುಟ್ಟ ಮಕ್ಕಳು. ಇದು ಯಾವುದೋ ಮೂರನೇ ಜಗತ್ತಿನ ದೇಶದ ಮರೆತುಹೋದ ಮೂಲೆಯಲ್ಲ. ಬಾಗಲಕೋಟೆಯಲ್ಲಿ ಮಕ್ಕಳು ತರಗತಿಯಲ್ಲಿ ಕುಳಿತಿದ್ದಾಗ ಶಾಲೆಯ ಛಾವಣಿ ಕುಸಿದು ಬಿದ್ದಿದೆ. ಇವರೇನೂ ಅಂಕಿ-ಅಂಶಗಳಲ್ಲ. ಇದು ಕರ್ನಾಟಕ,ಇದು ಕಾಂಗ್ರೆಸ್ ಆಡಳಿತದ ಕರ್ನಾಟಕ ಎಂದು ಹರಿಹಾಯ್ದರು.
ಈ ಕರ್ನಾಟಕದ ಖಟಾಖಟ್ ರೂಫ್ ಶಾಲೆಯಲ್ಲಿ `ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸುವ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ನೀವು ನ್ಯಾಯದ ಭಾಷಣಗಳನ್ನು ಮಾಡಿದ್ದೀರಿ. ಗ್ಯಾರಂಟಿಗಳನ್ನು ಮಾರಾಟ ಮಾಡಿದ್ದೀರಿ. ಖಟಾಖಟ್ ಎಂದು ಕೂಗಿದ್ದೀರಿ. ಈಗ ಬಂದು ವಿದ್ಯಾರ್ಥಿಗಳ ಮಾತುಗಳನ್ನು ಕೇಳಿ ಎಂದರು.





